ರಾಮ್ ಚರಣ್ ನಟನೆಯ ಹಿಂದಿನ ಸಿನಿಮಾ ‘ಗೇಮ್ ಚೆಂಜರ್’ ದೊಡ್ಡ ಫ್ಲಾಪ್ ಆಗಿದೆ. ರಾಮ್ ಚರಣ್ ಮತ್ತು ಅವರ ಅಭಿಮಾನಿಗಳು ಈ ಬಗ್ಗೆ ಬೇಸರದಲ್ಲಿದ್ದಾರೆ. ಆದರೆ ಆ ಸಿನಿಮಾದ ನಿರ್ಮಾಪಕರುಗಳು ಹೋದಲ್ಲಿ, ಬಂದಲ್ಲೆಲ್ಲ ‘ಗೇಮ್ ಚೇಂಜರ್’ ಫ್ಲಾಪ್ ಬಗ್ಗೆ ಮಾತನಾಡುತ್ತಾ ಅಭಿಮಾನಿಗಳಿಗೆ ಇನ್ನಷ್ಟು ಬೇಸರ ತರಿಸುತ್ತಿದ್ದಾರೆ. ಇದೀಗ ರಾಮ್ ಚರಣ್ ಅಭಿಮಾನಿಗಳು ನಿರ್ಮಾಪಕರಿಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ರಾಮ್ ಚರಣ್ ಪ್ರಸ್ತುತ ‘ಪೆದ್ದಿ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ‘ಆರ್ಆರ್ಆರ್’ ಸಿನಿಮಾದ ಮೂಲಕ ಭಾರಿ ದೊಡ್ಡ ಹಿಟ್ ಕೊಟ್ಟ ರಾಮ್ ಚರಣ್ ಅದಾದ ಬಳಿಕ ಒಂದರ ಹಿಂದೆ ಒಂದರಂತೆ ಎರಡು ಫ್ಲಾಪ್ ಸಿನಿಮಾಗಳನ್ನು ನೀಡಿದ್ದಾರೆ. ‘ಆರ್ಆರ್ಆರ್’ ಬಳಿಕ ಬಿಡುಗಡೆ ಆದ ‘ಆಚಾರ್ಯ’ ಅಟ್ಟರ್ ಫ್ಲಾಪ್ ಆಯ್ತು, ಆದರೆ ಆ ಸಿನಿಮಾನಲ್ಲಿ ಮೆಗಾಸ್ಟಾರ್ ಚಿರಂಜೀವಿ ಮುಖ್ಯ ಹೀರೋ ಹಾಗಾಗಿ ರಾಮ್ ಚರಣ್ ಅಭಿಮಾನಿಗಳು ಹೆಚ್ಚಿಗೆ ತಲೆ ಕೆಡಿಸಿಕೊಂಡಿರಲಿಲ್ಲ. ಅದಾದ ಬಳಿಕ ಬಂದ ‘ಗೇಮ್ ಚೇಂಜರ್’ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೀನಾಯ ಸೋಲು ಕಂಡಿತು. ಸಿನಿಮಾ ಸೋತ ಬಳಿಕ ಸಿನಿಮಾದ ನಿರ್ಮಾಪಕರು ಆಡುತ್ತಿರುವ ಮಾತುಗಳು ಸ್ವತಃ ರಾಮ್ ಚರಣ್ ಹಾಗೂ ಅವರ ಅಭಿಮಾನಿಗಳಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಸಿನಿಮಾದ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರಿಷ್ ಅವರುಗಳು ಹೋದಲ್ಲಿ ಬಂದಲ್ಲಿ ಎಲ್ಲ ‘ಗೇಮ್ ಚೇಂಜರ್’ ಸೋಲಿನ ಬಗ್ಗೆಯೇ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಮಾತನಾಡಿದ ಸಿರೀಶ್, ‘ಗೇಮ್ ಚೇಂಜರ್’ ಸೋಲುತ್ತದೆ ಎಂಬುದು ಮುಂಚೆಯೇ ಗೊತ್ತಾಗಿತ್ತು. ಹಾಗಾಗಿ ನಾವು ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ಬಿಡುಗಡೆ ಮಾಡಿ, ಆದ ನಷ್ಟವನ್ನು ಸರಿದೂಗಿಸಿಕೊಂಡಿದ್ದೆವೆ’ ಎಂದಿದ್ದರು. ದಿಲ್ ರಾಜು ಸಹ ಹಲವು ಸಿನಿಮಾ ಕಾರ್ಯಕ್ರಮಗಳಲ್ಲಿ ‘ಗೇಮ್ ಚೇಂಜರ್’ ಸೋಲಿನ ಬಗ್ಗೆ ಮಾತನಾಡಿ ಅಭಿಮಾನಿಗಳಗೆ ಬೇಸರ ತಂದಿದ್ದರು.
ಇದರಿಂದ ರೋಸಿ ಹೋಗಿರುವ ರಾಮ್ ಚರಣ್ ಅಭಿಮಾನಿಗಳು ನಿರ್ಮಾಪಕರುಗಳಿಗೆ ಬಹಿರಂಗ ಪತ್ರ ಬರೆದು ಎಚ್ಚರಿಕೆ ನೀಡಿದ್ದಾರೆ. ‘ಸಿನಿಮಾ ಎಂದರೆ ವ್ಯವಹಾರ, ಅದರಲ್ಲಿ ಲಾಭ ಮತ್ತು ನಷ್ಟ ಸಾಮಾನ್ಯ. ನಿಮ್ಮ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುವ ಸಿನಿಮಾಗಳು ಗೆಲ್ಲುವುದು ನಿಮ್ಮಿಂದಲೇ ಎಂದು ಹೇಳಿಕೊಳ್ಳುವ ನೀವು ಒಂದು ಸಿನಿಮಾ ಸೋತಾಗ ಅದರ ಜವಾಬ್ದಾರಿ ನೀವೇ ಏಕೆ ತೆಗೆದುಕೊಳ್ಳುತ್ತಿಲ್ಲ. ನಿಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣವಾದ ‘ನೇನೊಕ್ಕಡಿನೆ’ ಸಿನಿಮಾ ಸೋತಾಗ ನೀವು ಆ ನಾಯಕನ ಬಗ್ಗೆ ಏಕೆ ಮಾತನಾಡಿರಲಿಲ್ಲ, ಆದರೆ ಈಗ ಏಕೆ ರಾಮ್ ಚರಣ್ ಬಗ್ಗೆ ಮಾತನಾಡುತ್ತಿದ್ದೀರಿ?’ ಎಂದು ಪ್ರಶ್ನೆ ಮಾಡಿದ್ದಾರೆ.

