ಮನಿ ಪ್ಲಾಂಟ್ ಇಡುವ ಮೊದಲು ತಪ್ಪದೇ ತಿಳಿಯಬೇಕಾದ ವಾಸ್ತು ನಿಯಮಗಳು
ಮನೆಯಲ್ಲಿ ಮನಿ ಪ್ಲಾಂಟ್ ಇಡುವ ಕುರಿತು ವಾಸ್ತು ಶಾಸ್ತ್ರದ ಮಹತ್ವ ಮತ್ತು ಪ್ರಮುಖ ನಿಯಮಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಹಸಿರು ಬಣ್ಣವು ಬುಧ ಗ್ರಹದ ಸಂಕೇತವಾಗಿದೆ. ಬುಧಾಂಶವು ಮನೆಯಲ್ಲಿ ಹೆಚ್ಚಿದಾಗ ಧನಾತ್ಮಕ ಶಕ್ತಿ, ಶಾಂತಿ ಮತ್ತು ಸಂತೋಷ ಹೆಚ್ಚಾಗುತ್ತದೆ. ಮನೆಯಲ್ಲಿ ಹಸಿರು ಬಣ್ಣದ ಕಾರ್ಪೆಟ್, ಮ್ಯಾಟ್ ಅಥವಾ ಸಸ್ಯಗಳನ್ನು ಇಡುವುದರಿಂದ ಸಕಾರಾತ್ಮಕ ಲಹರಿಗಳು ಆಕರ್ಷಿತವಾಗುತ್ತವೆ. ಈ ನಿಟ್ಟಿನಲ್ಲಿ ಮನಿ ಪ್ಲಾಂಟ್ ಒಂದು ಪ್ರಮುಖ ಪಾತ್ರ ವಹಿಸುತ್ತದೆ.
ಮನಿ ಪ್ಲಾಂಟ್ ಅನ್ನು ಮನೆಯಲ್ಲಿ, ಕಚೇರಿಯಲ್ಲಿ ಅಥವಾ ಯಾವುದೇ ಆಶ್ರಮದಲ್ಲಿ ಇಡುವುದರಿಂದ ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಆದರೆ, ಇದರ ಪೂರ್ಣ ಪ್ರಯೋಜನಗಳನ್ನು ಪಡೆಯಲು ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದು ಅನಿವಾರ್ಯ. ಮೊದಲನೆಯದಾಗಿ, ಮನಿ ಪ್ಲಾಂಟ್ ಅನ್ನು ಎಂದಿಗೂ ಒಣಗದಂತೆ ನೋಡಿಕೊಳ್ಳಬೇಕು. ಬರೀ ನೀರು ಹಾಕಿದರೆ ಸಾಕು, ಅದು ಬಳ್ಳಿಯಾಗಿ ಹಬ್ಬುತ್ತದೆ. ಒಣಗಿದ ಎಲೆಗಳು ನಕಾರಾತ್ಮಕ ಪ್ರಭಾವ ಬೀರುತ್ತವೆ.
ವಾಸ್ತು ಪ್ರಕಾರ, ಮನಿ ಪ್ಲಾಂಟ್ ಅನ್ನು ಟೆರೇಸ್ ಅಥವಾ ಬಾಲ್ಕನಿಗಳಲ್ಲಿ ಇಡುವುದು ಬಹಳ ಶುಭ. ಇದು ತೆರೆದ ವಾತಾವರಣದಲ್ಲಿ ಬೆಳೆಯುವುದರಿಂದ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಆದರೆ, ಪ್ರವೇಶ ದ್ವಾರದ ಹಿಂದೆ ಅಥವಾ ಮುಂದೆ, ಅಕ್ಕಪಕ್ಕದಲ್ಲಿ ಮನಿ ಪ್ಲಾಂಟ್ ಇಡುವುದು ಶುಭವಲ್ಲ. ಮನೆಯೊಳಗೆ ಪ್ರವೇಶಿಸುವಾಗ ಮನಿ ಪ್ಲಾಂಟ್ ಇಡಬಾರದು. ಹಾಗೆಯೇ, ಅಡುಗೆ ಮನೆಯಲ್ಲಿ ಮತ್ತು ಮಲಗುವ ಕೋಣೆಯಲ್ಲಿ ಮನಿ ಪ್ಲಾಂಟ್ ಇಡುವುದನ್ನು ವಾಸ್ತು ಶಾಸ್ತ್ರ ನಿಷೇಧಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದು ಪ್ರಮುಖ ನಿಯಮವೆಂದರೆ, ಮನಿ ಪ್ಲಾಂಟ್ ಅನ್ನು ಯಾರಿಗೂ ಉಡುಗೊರೆಯಾಗಿ ನೀಡಬಾರದು ಅಥವಾ ಯಾರಿಂದಲೂ ಉಡುಗೊರೆಯಾಗಿ ಸ್ವೀಕರಿಸಬಾರದು. ಶುಭ ಕಾರ್ಯಗಳಲ್ಲಿ ಗಿಡಗಳನ್ನು ನೀಡುವುದು ರೂಢಿಯಲ್ಲಿದ್ದರೂ, ಮನಿ ಪ್ಲಾಂಟ್ ವಿಷಯದಲ್ಲಿ ಈ ನಿಯಮ ಅನ್ವಯಿಸುವುದಿಲ್ಲ. ಇದನ್ನು ನರ್ಸರಿಯಿಂದ ಹಣ ನೀಡಿ ಖರೀದಿಸಬೇಕು.
For More Updates Join our WhatsApp Group :




