ಉಡುಪಿ ಜಿಲ್ಲಾಧಿಕಾರಿಯೇ ಮಾಡಿದ್ರು ಕನ್ಯಾದಾನ.
ಉಡುಪಿ : ಅನಾಥ ಹೆಣ್ಣು ಮಕ್ಕಳ ಅದ್ಧೂರಿ ವಿವಾಹಕ್ಕೆ ಉಡುಪಿಯ ರಾಜ್ಯ ಮಹಿಳಾ ನಿಲಯ ಸಾಕ್ಷಿಯಾಗಿದೆ. ಜಿಲ್ಲಾಡಳಿತ ನೇತೃತ್ವದಲ್ಲಿ ಇಬ್ಬರ ವಿವಾಹ ಕಾರ್ಯಕ್ರಮ ನೆರವೇರಿದ್ದು, ಜಿಲ್ಲಾಧಿಕಾರಿಯೇ ಮುಂದೆ ನಿಂತು ಕನ್ಯಾದಾನ ಮಾಡಿದ್ದು ವಿಶೇಷವಾಗಿತ್ತು. ಆ ಮೂಲಕ ರಾಜ್ಯ ಮಹಿಳಾ ನಿಲಯದಲ್ಲಿ ಈವರೆಗೆ ನೆರವೇರಿದ ಮದುವೆಗಳ ಸಂಖ್ಯೆ 25ರ ಗಡಿ ತಲುಪಿತು.
ಕಿವಿ ಕೇಳಿಸದ, ಮಾತು ಬಾರದ ಅನಾಥ ಯುವತಿಯ ಬಾಳಿಗೆ ಹಾಸನದ ಕೃಷಿಕ ಬೆಳಕಾಗಿ ಬಂದರೆ, ವಿವಾಹವಾದ ಮತ್ತೋರ್ವ ಯುವತಿ ಈಗ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ. ಎಂಕಾಂ ಮಾಡಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಯುವಕನ ಜೊತೆ ಈಕೆ ಸಪ್ತಪದಿ ತುಳಿದಿದ್ದು, ಆಕೆಯ ಮುಂದಿನ ಓದಿನ ಜವಾಬ್ದಾರಿಯನ್ನೂ ಆತ ಹೊತ್ತಿದ್ದಾನೆ. ವಿದ್ಯಾಭ್ಯಾಸ ಮಾಡುತ್ತಿರುವ ಹುಡುಗಿಗೆ ಉದ್ಯೋಗಸ್ಥ ಯುವಕನೇ ಬೇಕೆಂದು ಕಾದು ಕುಳಿತು ರಾಜ್ಯ ಮಹಿಳಾ ನಿಲಯ ಮದುವೆ ಮಾಡಿಸಿದೆ. ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರೇ ಮುಂದೆನಿಂತು ಮದುವೆಕಾರ್ಯ ನೆರವೇರಿಸಿದ್ದು, ಕನ್ಯಾದಾನ ಮಾಡಿದ್ದಾರೆ. ನವ ವಿವಾಹಿತರಿಗೆ ಆರತಿಯನ್ನೂ ಬೆಳಗಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಮದುವೆಗೆ ಹಾಜರಾಗಿದ್ದು, ನವ ವಿವಾಹಿತರ ಹೆಸರಿಗೆ 50 ಸಾವಿರ ರೂ. ಹಣ ಡೆಪಾಸಿಟ್ ಕೂಡ ಮಾಡಲಾಗಿದೆ. ಇದು ಸ್ವರ್ಗದಲ್ಲಿ ನಿಶ್ಚಯವಾದ ಮದುವೆ ಎಂದು ನೆರೆದಿದ್ದವರು ಹೇಳಿದ್ದಾರೆ. ಇನ್ನು ಬ್ರಾಹ್ಮಣ ಸಮುದಾಯ ಸೇರಿ ಕೃಷಿಕ ಕುಟುಂಬಗಳ ಯುವಕರಿಗೆ ಮದುವೆಯಾಗಲು ಕನ್ಯೆಯರ ಅಭಾವ ಹಿನ್ನಲೆ ಮದುವೆಗೆ ಕನ್ಯೆಯರಿಗೆ ಆಗ್ರಹಿಸಿ ಉಡುಪಿ ರಾಜ್ಯ ಮಹಿಳಾ ನಿಲಯಕ್ಕೆ ಅತೀ ಹೆಚ್ಚು ಬೇಡಿಕೆ ಬರುತ್ತಿವೆ ಎನ್ನಲಾಗಿದೆ.
For More Updates Join our WhatsApp Group :




