ಪವಿತ್ರಾ ಗೌಡ ಮನವಿಗೆ ‘ಬೇಡ’ ಎಂದ ದಾಸ.
ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್, ಪವಿತ್ರಾಗೌಡ ಮುಂತಾದವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಈಗಾಗಲೇ ನ್ಯಾಯಾಲಯದಲ್ಲಿ ಈ ಪ್ರಕರಣದ ಸಾಕ್ಷಿಗಳ ವಿಚಾರಣೆ ಆರಂಭ ಆಗಿದೆ. ಈ ಹೊತ್ತಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಲು ಪವಿತ್ರಾ ಗೌಡ ಪ್ರಯತ್ನಿಸುತ್ತಿದ್ದಾರೆ. ಜೈಲು ಸೇರಿದ ಬಳಿಕ ಅವರಿಬ್ಬರ ನಡುವೆ ಮಾತುಕಥೆ ಆಗಿಲ್ಲ. ಹಾಗಾಗಿ ದರ್ಶನ್ ಜೊತೆ ಮಾತನಾಡಲು ಪವಿತ್ರಾ ಗೌಡ ಹಂಬಲಿಸುತ್ತಿದ್ದಾರೆ. ಆದರೆ ಅದಕ್ಕೆ ದರ್ಶನ್ ಅವಕಾಶ ನೀಡುತ್ತಿಲ್ಲ! ಗೆಳತಿ ಪವಿತ್ರಾ ಗೌಡ ಜೊತೆ ಮಾತನಾಡಲು ದರ್ಶನ್ಅವರಿಗೆ ಈಗ ಮನಸ್ಸಿಲ್ಲ.
ಡಿಜಿಪಿ ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾಗ ಪವಿತ್ರಾ ಗೌಡ ಅವರು ಈ ಮನವಿ ಇಟ್ಟಿದ್ದರು. ಈ ಬೇಡಿಕೆಗೆ ಸಂಬಂಧಪಟ್ಟಂತೆ ಕಾನೂನಿನಲ್ಲಿ ಅವಕಾಶ ಇರುವು ಬಗ್ಗೆ ನೋಡುವುದಾಗಿ ಅಲೋಕ್ ಕುಮಾರ್ ಹೇಳಿದ್ದರು. ಅದನ್ನೇ ನೆಪವಾಗಿ ಇಟ್ಟುಕೊಂಡು ಪವಿತ್ರಾ ಗೌಡ ಅವರು ಮರಳಿ ಯತ್ನ ಮಾಡುತ್ತಿದ್ದಾರೆ. ಆದರೆ ದರ್ಶನ ಕಡೆಯಿಂದ ಅವರಿಗೆ ಸಹಕಾರ ಸಿಗುತ್ತಿಲ್ಲ.
ಪವಿತ್ರ ಗೌಡ ಭೇಟಿ ಮಾಡಲು ದರ್ಶನ್ ಅವರು ನಯವಾಗಿಯೇ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಪವಿತ್ರಾ ಗೌಡ ಅವರನ್ನು ಭೇಟಿ ಮಾಡಲು ದರ್ಶನ್ ಒಪ್ಪುತ್ತಿಲ್ಲ. ನಿನ್ನಿಂದಲೇ ಈ ಪರಿಸ್ಥಿತಿಗೆ ಬಂದಿದ್ದೇನೆ ಎಂಬ ರೀತಿಯಲ್ಲಿ ದರ್ಶನ್ ಅವರು ಭೇಟಿಗೆ ನಿರಾಕರಣೆ ಮಾಡಿದಂತಿದೆ. ತಮ್ಮನ್ನು ನೋಡಲು ಬಂದವರ ಬಳಿ ಕೇವಲ ಕಾನೂನು ಹೋರಾಟದ ಪ್ರಕ್ರಿಯೆಗಳ ಬಗ್ಗೆ ಅವರು ಮಾತನಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ಟ್ರಯಲ್ ಆರಂಭ ಆಗಿದೆ. ಡಿಸೆಂಬರ್ 17ರಂದು ರೇಣುಕಾಸ್ವಾಮಿ ತಂದೆ, ತಾಯಿಯನ್ನು ಕರೆದು ವಿಚಾರಣೆ ಮಾಡಲಾಯಿತು. ಇನ್ನೂ ನೂರಾರು ಸಾಕ್ಷಿಗಳಿಗೆ ಸಮನ್ಸ್ ನೀಡಿ ಕೋರ್ಟ್ ಟ್ರಯಲ್ ನಡೆಸಬೇಕಿದೆ. ಇಂಥ ಸಂದರ್ಭದಲ್ಲಿ ದರ್ಶನ್ ಜೊತೆ ಮಾತನಾಡಬೇಕು ಎಂಬುದು ಪವಿತ್ರಾ ಗೌಡ ಅವರ ಹಂಬಲ. ಆದರೆ ಅದಕ್ಕೆ ದರ್ಶನ್ ಕಡೆಯಿಂದ ನೀರಸ ಪ್ರತಿಕ್ರಿಯೆ ಬಂದಿದೆ.
For More Updates Join our WhatsApp Group :




