ನೆರೆ ರಾಜ್ಯಗಳಲ್ಲಿ ಕಾಗೆಗಳ ಹೆಚ್ಚು ಸಾವು, ಗಡಿದಾದ ಜಿಲ್ಲೆಗಳಲ್ಲಿ ಎಚ್ಚರಿಕೆ.
ಬೆಂಗಳೂರು: ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಹಕ್ಕಿಜ್ವರದ ಭೀತಿ ಹಿನ್ನೆಲೆ ರಾಜ್ಯದಲ್ಲೂ H5N1 ಟೆನ್ಷನ್ ಶುರುವಾಗಿದೆ. ಹಕ್ಕಿ ಜ್ವರಕ್ಕೆ ತಮಿಳನಾಡಿನಲ್ಲಿ 1,500ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿದ್ದರೆ, ಇತ್ತ ಮಹಾರಷ್ಟ್ರದಲ್ಲೂ ವೈರಸ್ ಸದ್ದು ಮಾಡತೊಡಗಿದೆ. ಹೀಗಾಗಿ ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಪಶುಸಂಗೋಪಾನ ಇಲಾಖೆ ಸೂಚಿಸಿದೆ. ಹಕ್ಕಿ ಜ್ವರದ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಏನಿದು ಹಕ್ಕಿಜ್ವರ?
ಇದು H5N1 ವೈರಸ್ನಿಂದ ಪಕ್ಷಿಗಳಲ್ಲಿ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸೋಂಕಿತ ಪಕ್ಷಿಗಳ ನೇರ ಸಂಪರ್ಕ, ಲಾಲಾರಸ ಅಥವಾ ಮಲದಿಂದ ಮನುಷ್ಯರಲ್ಲೂ ಹಕ್ಕಿ ಜ್ವರ ಕಾಣಿಸಿಕೊಳ್ಳಬಹುದಾಗಿದೆ. ಸೋಂಕಿತ ಪ್ರಾಣಿಗಳ ಮಲ, ಮೂಗು ಅಥವಾ ಬಾಯಿಯ ಸ್ರವಿಸುವಿಕೆಯಿಂದ ಮನುಷ್ಯರಿಗೆ ಈ ವೈಎಸ್ ಹರಡುವ ಸಾಧ್ಯತೆ ಹೆಚ್ಚು. ಮಾನವರಲ್ಲಿ ಹಕ್ಕಿ ಜ್ವರದ ಲಕ್ಷಣಗಳು ಸಾಮಾನ್ಯವಾಗಿ ಸೋಂಕಿತ ಹಕ್ಕಿಯೊಂದಿಗೆ ಸಂಪರ್ಕಕ್ಕೆ ಬಂದ 4 ರಿಂದ 6 ದಿನಗಳ ನಂತರ ಪ್ರಾರಂಭವಾಗುತ್ತದೆ ಎನ್ನಲಾಗಿದೆ.
ರೋಗ ಲಕ್ಷಣಗಳು ಏನು?
- ಉಸಿರಾಟದಲ್ಲಿ ತೊಂದರೆ
- ಜ್ವರ
- ಕಣ್ಣು ಕೆಂಪಾಗುವುದು ಮತ್ತು ಕಿರಿಕಿರಿ
- ಕೆಮ್ಮು
- ಗಂಟಲು ನೋವು
- ಸ್ನಾಯು ಅಥವಾ ದೇಹದ ನೋವು
- ತಲೆನೋವು -ಆಯಾಸ
- ನ್ಯೂಮೋನಿಯಾ
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯ ಡಾ.ಸುರೇಶ್, ಪೌಲ್ಟ್ರಿ ಮತ್ತು ವೆಟರ್ನರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತೆ. ಹಕ್ಕಿ ಜ್ವರಕ್ಕೆ ತುತ್ತಾದವರ ಸಾವಿನ ಪ್ರವಾಣ ಶೇ.50ರಷ್ಟಿದ್ದು, ಸೋಂಕು ಹೆಚ್ಚಾದರೆ ಸಾಂಕ್ರಾಮಿಕ ಆಗುವ ಸಾಧ್ಯತೆ ಇದೆ. ಹೀಗಾಗಿ ಸೆಮಿ ಬಾಯ್ಲ್ಡ್ ಫುಡ್ ಬಗ್ಗೆ ಜನರು ಎಚ್ಚರ ವಹಿಸಬೇಕು. ಅರೆಬೆಂದ ಮಾಂಸಾಹಾರದಿಂದ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ. ಹ್ಯಾಂಡ್ ಹೈಜಿನ್ ಕಡೆಗೂ ಮುಖ್ಯವಾಗಿ ಗಮನ ವಹಿಸಬೇಕು ಎಂದು ತಿಳಿಸಿದ್ದಾರೆ. ರೋಗ ಲಕ್ಷಣಗಳು ಕಂಡು ಬಂದಲ್ಲಿ ನಿರ್ಲಕ್ಷಯ ವಹಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆಯೂ ಅವರು ಸಲಹೆ ನೀಡಿದ್ದಾರೆ.
For More Updates Join our WhatsApp Group :




