ನವದೆಹಲಿ: ಇಂದು ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಛತ್ ಪೂಜೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಲು ಭಾರತ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಛತ್ ಪೂಜೆ ಸೂರ್ಯ ದೇವರಿಗೆ ಸಮರ್ಪಿತವಾಗಿದೆ, ಈ ವೇಳೆ ಭಕ್ತರು ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಅವರು ವಿವರಿಸಿದರು. ಮೂಲತಃ ಸ್ಥಳೀಯ ಸಂಪ್ರದಾಯವಾಗಿದ್ದ ಈ ಹಬ್ಬವು ಈಗ ಜಾಗತಿಕವಾಗಿ ಮನ್ನಣೆಯನ್ನು ಪಡೆಯುತ್ತಿದೆ ಎಂದರು.
“ಛತ್ ಪೂಜೆಗೆ ಸಂಬಂಧಿಸಿದ ಪ್ರಮುಖ ಪ್ರಯತ್ನದಲ್ಲಿ ಭಾರತ ಸರ್ಕಾರವೂ ತೊಡಗಿಸಿಕೊಂಡಿದೆ ಎಂದು ನಿಮಗೆ ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಛತ್ ಮಹಾಪರ್ವವನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಲು ಭಾರತ ಸರ್ಕಾರ ಶ್ರಮಿಸುತ್ತಿದೆ. ಛತ್ ಪೂಜೆಯನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಿದಾಗ, ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿರುವ ಜನರು ಅದರ ಭವ್ಯತೆ ಮತ್ತು ದೈವತ್ವವನ್ನು ಅನುಭವಿಸಲು ಸಾಧ್ಯವಾಗುತ್ತದೆ” ಎಂದಿದ್ದಾರೆ.
“ನಮ್ಮ ಹಬ್ಬಗಳು ಭಾರತದ ಸಂಸ್ಕೃತಿಯನ್ನು ಜೀವಂತವಾಗಿರಿಸುತ್ತವೆ. ಛತ್ ಪೂಜೆ ದೀಪಾವಳಿಯ ನಂತರ ಬರುವ ಪವಿತ್ರ ಹಬ್ಬ. ಸೂರ್ಯ ದೇವರಿಗೆ ಅರ್ಪಿತವಾದ ಈ ಭವ್ಯ ಹಬ್ಬವು ಬಹಳ ವಿಶೇಷವಾಗಿದೆ. ಇದರಲ್ಲಿ, ನಾವು ಮುಳುಗುವ ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ ಮತ್ತು ಅದನ್ನು ಪೂಜಿಸುತ್ತೇವೆ. ಛತ್ ಪೂಜೆಯನ್ನು ದೇಶದ ವಿವಿಧ ಭಾಗಗಳಲ್ಲಿ ಆಚರಿಸುವುದಲ್ಲದೆ, ಅದರ ವೈಭವವನ್ನು ಪ್ರಪಂಚದಾದ್ಯಂತ ಕಾಣಬಹುದು. ಇಂದು, ಇದು ಜಾಗತಿಕ ಹಬ್ಬವಾಗುತ್ತಿದೆ” ಎಂದು ಮೋದಿ ಹೇಳಿದರು.
“ಕೆಲವು ಸಮಯದ ಹಿಂದೆ ಭಾರತ ಸರ್ಕಾರದ ಇದೇ ರೀತಿಯ ಪ್ರಯತ್ನಗಳಿಂದಾಗಿ ಕೊಲ್ಕತ್ತಾದ ದುರ್ಗಾ ಪೂಜೆಯೂ ಈ ಯುನೆಸ್ಕೋ ಪಟ್ಟಿಯಲ್ಲಿ ಸೇರಿದೆ. ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಂತಹ ಜಾಗತಿಕ ಮನ್ನಣೆಯನ್ನು ನೀಡಿದರೆ, ಜಗತ್ತು ಅವುಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ” ಎಂದು ಮೋದಿ ಅಭಿಪ್ರಾಯಪಟ್ಟರು.
For More Updates Join our WhatsApp Group :
