ಮುಂಗಾರು ಮಳೆ ಅವಧಿಯಲ್ಲಿ ತೆಂಗಿನ ಬೆಳೆ ರಕ್ಷಣೆ, ಸಲಹೆಗಳು

ಚಿತ್ರದುರ್ಗ: ಜಿಲ್ಲೆಯ ತೆಂಗಿನ ಬೆಳೆಗಳಿಗೆ ರೋಗ ಮತ್ತು ಕೀಟದ ಬಾಧೆ ಹೆಚ್ಚಾಗಿದೆ. ಇದರಿಂದ ಇಳುವರಿ ಕುಂಠಿತವಾಗುವ ಆತಂಕ ರೈತರಲ್ಲಿ ಕಾಡುತ್ತಿದೆ. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣ ಬಸಪ್ಪ ಬೋಗಿ ಇದನ್ನು ಗಮನಿಸಿ, ರೈತರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

ರೈತರು ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ವಿವರಣೆ ನೀಡಿದ್ದಾರೆ.

ತೆಂಗಿನ ಗಿಡಗಳಿಗೆ ಸೂಕ್ತ ರೀತಿಯ ಪೋಷಕಾಂಶಗಳನ್ನು ನೀಡುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಅಧಿಕ ಇಳುವರಿ ಪಡೆಯುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹೇಳಿದ್ದಾರೆ. ತೆಂಗಿನ ಗಿಡಗಳಿಗೆ ವರ್ಷವಿಡೀ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ ಎಂದು ತಿಳಿಸಿದ್ದಾರೆ.

ರೈತರಿಗೆ ಸಲಹೆಗಳು: ತೆಂಗು ನಾಟಿ ಮಾಡಿದ ಮೊದಲನೇ ವರ್ಷದಿಂದ ಪೋಷಕಾಂಶಗಳನ್ನು ಗಿಡಗಳಿಗೆ ಕೊಡುವುದರಿಂದ ಸರ್ವತೋಮುಖ ಬೆಳವಣಿಗೆ, ಬೇಗನೆ ಹೂ ಬಿಡುವುದು ಮತ್ತು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಸಂಶೋಧನೆ ಆಧಾರದ ಮೇಲೆ ಪೊಟಾಷ್ ರಾಸಾಯನಿಕ ತೆಂಗಿನ ಕಾಯಿಗಳ ಅಭಿವೃದ್ದಿಯಲ್ಲಿ ಮತ್ತು ಗಿಡದಲ್ಲಿ ರೋಗ ಮತ್ತು ಕೀಟಭಾದೆ ಪ್ರತಿರೋಧಕ ಶಕ್ತಿಯಲ್ಲಿ ಬೆಳಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಗಿಡ ನೆಟ್ಟ ಎರಡನೇ ವರ್ಷದಿಂದ ಮುಂಗಾರು ಅವಧಿಯಲ್ಲಿ ಪ್ರತಿ ಗಿಡಕ್ಕೆ 135 ಗ್ರಾಂ, ಮೂರನೇ ವರ್ಷದಲ್ಲಿ 270 ಗ್ರಾಂ ಹಾಗೂ ನಾಲ್ಕು ಮತ್ತು ನಂತರದ ವರ್ಷದಲ್ಲಿ 400 ಗ್ರಾಂ ಪೊಟಾಷ್ ಅನ್ನು ಗಿಡವೊಂದಕ್ಕೆ ನೀಡಬೇಕು.

ಅದೇ ಹಿಂಗಾರು ಅವಧಿಯಲ್ಲಿ ಪೊಟಾಷ್ ಅನ್ನು ಮೊದಲನೇ ವರ್ಷಕ್ಕೆ 135 ಗ್ರಾಂ, ಎರಡನೇ ವರ್ಷಕ್ಕೆ 270 ಗ್ರಾಂ, ಮೂರನೇ ವರ್ಷಕ್ಕೆ 540 ಗ್ರಾಂ, ನಾಲ್ಕು ಮತ್ತು ನಂತರದ ವರ್ಷದಲ್ಲಿ 800 ಗ್ರಾಂ. ಪ್ರತಿ ಗಿಡಕ್ಕೆ ನೀಡಬೇಕು.

ಇದೇ ಮಾದರಿಯಲ್ಲಿ ಮುಂಗಾರು ಅವಧಿಯಲ್ಲಿ ಎರಡನೇ ವರ್ಷಕ್ಕೆ ಸಾರಜನಕ 50 ಗ್ರಾಂ, ರಂಜಕ 40 ಗ್ರಾಂ, ಮೂರನೇ ವರ್ಷ ಸಾರಜನಕ 110 ಗ್ರಾಂ, ರಂಜಕ 80 ಗ್ರಾಂ, ನಾಲ್ಕು ಮತ್ತು ನಂತರದ ವರ್ಷಗಳಲ್ಲಿ ಸಾರಜನಕ 170 ಗ್ರಾಂ, ರಂಜಕ 120 ಗ್ರಾಂ ನೀಡಬೇಕು.

ಹಿಂಗಾರು ಅವಧಿಯಲ್ಲಿ ಮೊದಲನೇ ವರ್ಷ ಸಾರಜನಕ 50 ಗ್ರಾಂ, ರಂಜಕ 40 ಗ್ರಾಂ, ಎರಡನೇ ವರ್ಷ ಸಾರಜನಕ 110 ಗ್ರಾಂ, ರಂಜಕ 80 ಗ್ರಾಂ, ಮೂರನೇ ವರ್ಷ ಸಾರಜನಕ 220 ಗ್ರಾಂ, ರಂಜಕ 160 ಗ್ರಾಂ, ನಾಲ್ಕು ಹಾಗೂ ನಂತರದ ವರ್ಷದಲ್ಲಿ ಸಾರಜನಕ 330 ಗ್ರಾಂ, ರಂಜಕ 200 ಗ್ರಾಂ ಪ್ರತಿ ಗಿಡಕ್ಕೆ ನೀಡಬೇಕು.

ಇದರೊಂದಿಗೆ 100 ಗ್ರಾಂ ಬೋರನ್, 500 ಗ್ರಾಂ ಮೆಘ್ನೇಶಿಯಂ ಸಲ್ಪೇಟ್ ಹಾಗೂ 250 ಗ್ರಾಂ ಜಿಂಕ್ ಸಲ್ಪೇಟ್ ಅನ್ನು ಮಣ್ಣಿಗೆ ಸೇರಿಸುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ರೈತರಿಗೆ ಸಲಹೆ ನೀಡಲಾಗಿದೆ.

ಪ್ರತಿ ಗಿಡಕ್ಕೆ ಸಾವಯವ ಗೊಬ್ಬರಗಳಾದ ಎರೆಹುಳು ಗೊಬ್ಬರವನ್ನು 10 ಕೆಜಿ, ಕಾಂಪೋಷ್ಟ್ ಅಥವಾ ಸಗಣಿ ಗೊಬ್ಬರವನ್ನು 50 ಕೆಜಿ ಪ್ರತಿ ವರ್ಷ ಹಾಕಬೇಕು. ಹಸಿರೆಲೆ ಗೊಬ್ಬರಗಳ ಬೆಳೆಗಳಾದ ಸೆಣಬು, ಡಯಾಂಚ್, ಹಲಸಂದಿ ಮತ್ತು ಹುರಳಿ ಮುಂತಾದವುಗಳನ್ನು ಮಳೆಗಾಲದ ಪ್ರಾರಂಭ ಹಂತದಲ್ಲಿ ತೋಟಗಳಲ್ಲಿ ಬಿತ್ತನೆ ಮಾಡಿ, ಹೂ ಬಿಡುವ ಮುಂಚೆ ಉಳುಮೆ ಮಾಡಿ ಮಣ್ಣಿಗೆ ಸೇರಿಸುವುದರಿಂದ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು.

ಈ ನಿರ್ವಹಣಾ ಕ್ರಮಗಳನ್ನು ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕೆ ಇಲಾಖೆ ಕಛೇರಿಯನ್ನು ಸಂಪರ್ಕಿಸುವಂತೆ ರೈತರಿಗೆ ಮನವಿ ಮಾಡಲಾಗಿದೆ.

Leave a Reply

Your email address will not be published. Required fields are marked *