ನೀರು ಸಂಗ್ರಹಣೆ, ವಾಯುವಿಹಾರ, ಸುರಕ್ಷತೆ ಮತ್ತು ನೌಕಾಟ ಸೌಲಭ್ಯಗಳಿಗೆ ಗಮನ.
ಬೆಂಗಳೂರು :ಬೆಂಗಳೂರು ನಗರದ ಪ್ರಮುಖ ಕೆರೆಗಳಲ್ಲಿ ಒಂದಾದ *ಹಲಸೂರು ಕೆರೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಳು ಪ್ರಸ್ತುತ ಪ್ರಗತಿಯಲ್ಲಿದ್ದು, ಕೆರೆಯ ಪರಿಸರ ಹಾಗೂ ಸಾರ್ವಜನಿಕರಿಗೆ ಉತ್ತಮ ವಿನೋದಾತ್ಮಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ರಾಜೇಂದ್ರ ಚೋಳನ್* ತಿಳಿಸಿದರು.
ಕೆರೆಯಲ್ಲಿನ ನೀರಿನ ಸಂಗ್ರಹದ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಕೆರೆಯಲ್ಲಿ ಕಳೆದ 25 ವರ್ಷಗಳಿಂದ ಶೇಖರಣೆಯಾಗಿರುವ ಹೂಳೆತ್ತುವ (Desilting) ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಕೆರೆಯ ಆಳವನ್ನು ಹೆಚ್ಚಿಸುವುದರ ಜೊತೆಗೆ ನೀರಿನ ಸಂಗ್ರಹ ಸಾಮರ್ಥ್ಯವೂ ಹೆಚ್ಚಳವಾಗುವುದರ ಜೊತೆಗೆ ಸುತ್ತಮುತ್ತ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ.
ಇದಲ್ಲದೆ, ಕೆರೆಯ ಸುತ್ತಮುತ್ತ ಬಂಡ್ ರಕ್ಷಣೆಯೊಂದಿಗೆ ಎರಡು ಹಂತದ ವಾಯುವಿಹಾರಿಗಳಿಗೆ ಸುಲಭ ನಡಿಗೆ ಮಾರ್ಗ (Two Level Walkway) ನಿರ್ಮಾಣ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಸುರಕ್ಷಿತವಾಗಿ ನಡೆದು ವಿಶ್ರಾಂತಿ ಪಡೆಯಲು, ಆರೋಗ್ಯ ವೃದ್ಧಿಗೆ ಅನುಕೂಲವಾಗಲಿದೆ.
ಕೆರೆಯ ಗಡಿ ಭಾಗದಲ್ಲಿ (ದಡದಲ್ಲಿ) ಸುರಕ್ಷಾ ಕ್ರಮವಾಗಿ ಅಲಂಕಾರಿಕ ಗ್ರಿಲ್ಗಳನ್ನು ಅಳವಡಿಸುವ ಕಾರ್ಯವೂ ನಡೆಯುತ್ತಿದ್ದು, ಇದು ನಾಗರಿಕರ ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಕೆರೆಯ ಸೌಂದರ್ಯವನ್ನು ಮತ್ತಷ್ಟು ವೃದ್ಧಿಸಲಿದೆ.
ಇದೇ ಸಂದರ್ಭದಲ್ಲಿ, ಕೆರೆಯ ಪ್ರದೇಶವನ್ನು ಸಮೀಪದ ಉದ್ಯಾನವನದೊಂದಿಗೆ ಸಂಪರ್ಕಿಸುವ ಸಂಪರ್ಕ ಸೇತುವೆ (Connecting Bridge) ನಿರ್ಮಾಣ ಕಾರ್ಯವನ್ನೂ ಕೈಗೊಳ್ಳಲಾಗುತ್ತಿದೆ. ಜೊತೆಗೆ ಹೊಸ ಕಲ್ಯಾಣಿ ನಿರ್ಮಾಣ ಸೇರಿದಂತೆ ಇತರೆ ಸಂಬಂಧಿತ ಅಭಿವೃದ್ಧಿ ಕಾಮಗಾರಿಗಳನ್ನು ಕೂಡ ಕೈಗೊಳ್ಳಲಾಗುತ್ತಿದೆ.
ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಮೂಲಕ ಹಲಸೂರು ಕೆರೆಯ ಪರಿಸರ ಸಮತೋಲನವನ್ನು ಕಾಪಾಡುವುದರ ಜೊತೆಗೆ ನಾಗರಿಕರಿಗೆ ಉತ್ತಮ ವಿಶ್ರಾಂತಿ ಹಾಗೂ ಮನರಂಜನಾ ವಾತಾವರಣವನ್ನು ಒದಗಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಆಯುಕ್ತರಾದ ರಾಜೇಂದ್ರ ಚೋಳನ್ ರವರು ತಿಳಿಸಿದ್ದಾರೆ.
For More Updates Join our WhatsApp Group :




