ಜೈಲಧಿಕಾರಿಗಳ ಬಳಿ ಈ ಒಂದು ಸೌಲಭ್ಯಕ್ಕೆ ಬೇಡಿಕೆ ಇಟ್ಟ ದರ್ಶನ್

ಬಳ್ಳಾರಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜ್ಯಾತಿಥ್ಯ ಸಿಗುತ್ತಿದೆ ಎಂಬ ಸುದ್ದಿ ಭಾರಿ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರವಾಗಿರುವ ನಟ ದರ್ಶನ್, ಜೈಲಧಿಕಾರಿಗಳ ಮುಂದೆ ಹೊಸದೊಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇರುವಾಗ ರೌಡಿ ವಿಲ್ಸನ್ ನಾಗನ ಜತೆ ಕುಳಿತು, ಸಿಗರೇಟ್ ಸೇದುತ್ತಾ ಕಾಫಿ ಕುಡಿಯುತ್ತಿರುವ ಫೋಟೋ ಸೋರಿಕೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದು ಭಾರಿ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ದರ್ಶನ್ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಿದೆ.

ಇದೀಗ ಬಳ್ಳಾರಿಯ ಜೈಲಿನಲ್ಲಿ ದಿನ ದೂಡುತ್ತಿರುವ ನಟ ದರ್ಶನ್ ಜೈಲು ಅಧಿಕಾರಿಗಳ ಬಳಿ ಹೊಸದೊಂದು ಬೇಡಿಕೆ ಇಟ್ಟಿದ್ದಾರಂತೆ. ಇಷ್ಟು ದಿನ ಟಿವಿ ಬೇಡ ಎನ್ನುತ್ತಿದ್ದ ದರ್ಶನ್, ಇದೀಗ ನನಗೆ ಟಿವಿ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಟಿವಿ ಸೌಲಭ್ಯ ಸಂಬಂಧ ಅರ್ಜಿ ಸಲ್ಲಿಸುವಂತೆ ಜೈಲು ಸಿಬ್ಬಂದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಇಡೀ ಪ್ರಕರಣದ ತನಿಖೆ ಮುಕ್ತಾಯವಾಗಿದ್ದು, ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇಂದು ಅಥವಾ ನಾಳ ಯಾವಾಗಬೇಕಾದರೂ ತನಿಖಾಧಿಕಾರಿಗಳು ಕೋರ್ಟ್ ಮುಂದೆ ಚಾರ್ಜ್ಶೀಟ್ ಸಲ್ಲಿಸಬಹುದು. ಈ ಹೊತ್ತಿನಲ್ಲೇ ದರ್ಶನ್, ಟಿವಿಗೆ ಬೇಡಿಕೆ ಇಟ್ಟಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆಯಾದ ಬಳಿಕ ಜಾಮೀನು ಪಡೆಯಲು ಅರ್ಜಿ ಸಲ್ಲಿಸಹುದು. ಹೀಗಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗುವ ಅಂಶಗಳ ಮೇಲೆ ಎಲ್ಲರ ಗಮನವಿದೆ. ಹೀಗಾಗಿ ದರ್ಶನ್ ಕೂಡ ಚಾರ್ಜ್ಶೀಟ್ ಬಗ್ಗೆ ತಿಳಿದುಕೊಳ್ಳಲು ಟಿವಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಚಾರ್ಜ್ಶೀಟ್ ಸಲ್ಲಿಸಿದ ಮೇಲೆಯೇ ದರ್ಶನ್, ಜಾಮೀನಿಗೆ ಅರ್ಜಿ ಹಾಕುವ ಸಾಧ್ಯತೆ ಇದೆ. ಮೊನ್ನೆ ಪತ್ನಿ ವಿಜಯಲಕ್ಷ್ಮಿಯಿಂದ ಈ ಬಗ್ಗೆ ಮಾಹಿತಿ ಪಡೆದು ನ್ಯಾಯಂಗದ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಚಾರ್ಜ್ಶೀಟ್ ಕೊಂಚ ಆತಂಕಕ್ಕೆ ಕಾರಣವಾಗಿದ್ದರೂ ಕೊಂಚ ನಿರಾಳವನ್ನು ತಂದಿದೆ. ಏಕೆಂದರೆ, ಚಾರ್ಜ್ಶೀಟ್ ಸಲ್ಲಿಕೆಯಾದರೆ, ಜಾಮೀನಿಗೆ ಅರ್ಜಿ ಸಲ್ಲಿಸಿ, ಮನವಿ ಮಾಡಲು ಅನುಕೂಲವಾಗಲಿದೆ.

Leave a Reply

Your email address will not be published. Required fields are marked *