ಶಿವಮೊಗ್ಗ: ಭದ್ರಾವತಿಯ ಮನೆ, ಡಾ. ಮಲ್ಲೇಶ್ ಆರೋಪಿ ಬಂಧಿತ
ಶಿವಮೊಗ್ಗ: ಭದ್ರಾವತಿಯ ಭೂತನಗುಡಿ ಬಡಾವಣೆಯಲ್ಲಿ ಮನೆಯಲ್ಲಿಯೇ ವೃದ್ಧ ದಂಪತಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆಯನ್ನು ಪೊಲೀಸರು ಭೇದಿಸಿದ್ದಾರೆ. ಸಂಬಂಧಿಕ ಮತ್ತು ವೈದ್ಯನಾಗಿರುವ ಡಾ. ಮಲ್ಲೇಶ್ ಎಂಬಾತನೇ ಚಂದ್ರಪ್ಪ(80) ಮತ್ತು ಅವರ ಪತ್ನಿ ಜಯಮ್ಮ(75) ಅವರನ್ನು ಕೊಲೆ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಪಕ್ಕಾ ಪ್ಲ್ಯಾನ್ ಮಾಡಿ ಕೃತ್ಯ ಎಸಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮ್ಮನ ಮಗನಾಗಿರುವ ಡಾ . ಮಲ್ಲೇಶ್ನಿಂದಲೇ ಮೃತ ಚಂದ್ರಪ್ಪ ಮತ್ತು ಅವರ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಪಿ ವೈದ್ಯ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಹೀಗಾಗಿ ದೊಡ್ಡಪ್ಪನ ಬಳಿ ಹಣ ಕೇಳಿದ್ದ. ಇದಕ್ಕೆ ಅವರು ಒಪ್ಪದ ಕಾರಣ ದೊಡ್ಡಪ್ಪ-ದೊಡ್ಡಮ್ಮ ಅಂತಲೂ ನೋಡದೆ ಕೊಲೆ ಮಾಡಿದ್ದಾನೆ. ಚಿಕಿತ್ಸೆ ನೆಪದಲ್ಲಿ ಇಬ್ಬರಿಗೂ ಇಂಜೆಕ್ಷನ್ ನೀಡಿದ್ದು, ಇದರಿಂದಲೇ ದಂಪತಿ ಮೃತಪಟ್ಟಿದ್ದಾರೆ. ದೇಹದ ಮೇಲೆ ಯಾವುದೇ ಗಾಯ ಮಾಡದೆ ಆರೋಪಿ ಡಬಲ್ ಮರ್ಡರ್ ಮಾಡಿದ್ದು, ಬಳಿಕ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ದೋಚಿದ್ದ ಎಂಬುದು ಗೊತ್ತಾಗಿದೆ.
ಮಕ್ಕಳು ತಮ್ಮ ಪೋಷಕರಿಗೆ ಫೋನ್ ಮಾಡಿದಾಗ ದಂಪತಿಗಳು ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಗೊಂಡ ಮಕ್ಕಳು ಸ್ಥಳೀಯರಿಗೆ ವಿಷಯ ತಿಳಿಸಿದ್ದರು. ಬಳಿಕ ಸ್ಥಳೀಯರು ಮನೆಗೆ ಹೋಗಿ ಪರಿಶೀಲಿಸಿದಾಗ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ಮನೆಯ ಬೆಡ್ರೂಮ್ನಲ್ಲಿ ಚಂದ್ರಪ್ಪ ಅವರ ಶವ ಪತ್ತೆಯಾದರೆ, ಹಾಲ್ನಲ್ಲಿ ಪತ್ನಿ ಜಯಮ್ಮ ಶವ ಬಿದ್ದಿರುವುದು ಗೊತ್ತಾಗಿತ್ತು. ಮೃತ ಚಂದ್ರಪ್ಪ ಭದ್ರಾವತಿಯ ವಿಐಎಸ್ಎಲ್ ನಿವೃತ್ತ ಉದ್ಯೋಗಿಯಾಗಿದ್ದು, ಮನೆಗೆ ನುಗ್ಗಿ ದರೋಡೆಕೋರರು ಹತ್ಯೆಗೈದಿರುವ ಬಗ್ಗೆ ಮೊದಲು ಅನುಮಾನ ವ್ಯಕ್ತವಾಗಿತ್ತು. ಈ ಆಧಾರದಲ್ಲಿ ಪೊಲೀಸರು ತನಿಖೆಗೆ ಇಳಿದಾಗ ಸಂಬಂಧಿಕ ವೈದ್ಯನೇ ಕೃತ್ಯ ಎಸಗಿರೋದು ಬಯಲಾಗಿದೆ.
For More Updates Join our WhatsApp Group :




