ಲಂಕೇಶ್, ಇಂದ್ರಜಿತ್ ಬಳಿಕ ಸಮರ್ಜಿತ್ ಕೈಗೆ ಪ್ರತಿಷ್ಠಿತ ಪ್ರಶಸ್ತಿ.
ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ 70ನೇ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ 2024ನೇ ಸಾಲಿನ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಯಿತು. ‘ಗೌರಿ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಸಮರ್ಜಿತ್ ಲಂಕೇಶ್ ಅವರು ‘ಅತ್ಯುತ್ತಮ ನವನಟ’ ಪ್ರಶಸ್ತಿ ಪಡೆದುಕೊಂಡರು. ವಿಶೇಷ ಏನೆಂದರೆ, ಲಂಕೇಶ್ ಕುಟುಂಬಕ್ಕೆ ಸಿಗುತ್ತಿರುವ ಮೂರನೆಯ ಫಿಲ್ಮ್ಫೇರ್ ಪ್ರಶಸ್ತಿ ಇದು. ಈ ಮೊದಲು ಲಂಕೇಶ್ ಮತ್ತು ಇಂದ್ರಜಿತ್ ಲಂಕೇಶ್ ಅವರು ಕೂಡ ಫಿಲ್ಮ್ಫೇರ್ ಪ್ರಶಸ್ತಿ ಪಡೆದಿದ್ದರು.
ಕನ್ನಡದ ಜನಪ್ರಿಯ ಸಾಹಿತಿ ಹಾಗೂ ‘ಲಂಕೇಶ್ ಪತ್ರಿಕೆ’ ಸಂಪಾದಕರಾಗಿದ್ದ ಪಿ. ಲಂಕೇಶ್ ಅವರು 1980ರಲ್ಲಿ ‘ಎಲ್ಲಿಂದಲೋ ಬಂದವರು’ ಸಿನಿಮಾದ ನಿರ್ದೇಶನಕ್ಕಾಗಿ ಫಿಲ್ಮ್ಫೇರ್ (ದಕ್ಷಿಣ) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತರಾಗಿದ್ದ ಲಂಕೇಶ್ ಅವರು ಚಿತ್ರರಂಗದಲ್ಲೂ ನಿರ್ದೇಶಕರಾಗಿ ಹೆಸರು ಮಾಡಿದ್ದರು. ‘ಪಲ್ಲವಿ’, ‘ಅನುರೂಪ’, ‘ಖಂಡವಿದೆಕೋ ಮಾಂಸವಿದೆಕೋ’, ‘ಎಲ್ಲಿಂದಲೋ ಬಂದವರು’ ಸಿನಿಮಾಗಳನ್ನು ನಿರ್ದೇಶಿಸಿದ್ದರು.
ಲಂಕೇಶ್ ಪುತ್ರ ಇಂದ್ರಜಿತ್ ಲಂಕೇಶ್ ಅವರು ‘ತುಂಟಾಟ’ ಸಿನಿಮಾ ಮೂಲಕ ನಿರ್ದೇಶಕರಾದರು. ನಂತರ ‘ಮೋನಾಲಿಸಾ’, ‘ಐಶ್ವರ್ಯ’, ‘ಹುಡುಗ ಹುಡುಗಿ’, ‘ಲವ್ ಯೂ ಆಲಿಯಾ’, ‘ಶಕೀಲಾ’, ‘ಗೌರಿ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದರು. ಉಪೇಂದ್ರ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಐಶ್ವರ್ಯ’ ಚಿತ್ರದ ನಿರ್ದೇಶನಕ್ಕಾಗಿ ಅವರು ‘ಅತ್ಯುತ್ತಮ ನಿರ್ದೇಶನ’ ಫಿಲ್ಮ್ಫೇರ್ ಪ್ರಶಸ್ತಿ ಪಡೆದಿದ್ದರು.
ಈಗ ಲಂಕೇಶ್ ಕುಟುಂಬದ 3ನೇ ತಲೆಮಾರಿನ ಸಮರ್ಜಿತ್ ಅವರು ಚೊಚ್ಚಲ ಅಭಿನಯದ ಸಿನಿಮಾಗೆ ಪ್ರಶಸ್ತಿ ಪಡೆದಿದ್ದಾರೆ. ‘ಗೌರಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಸಮರ್ಜಿತ್ ಅವರು ಮೊದಲ ಚಿತ್ರದಲ್ಲೇ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
‘ಗೌರಿ’ ಸಿನಿಮಾ ಬಳಿಕ ಕಳೆದ ವರ್ಷ ಬಿಡುಗಡೆಯಾಗಿದ್ದ ‘ವೃಷಭ’ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಸಮರ್ಜಿತ್ ನಟಿಸಿದರು. ಈ ಸಿನಿಮಾದಲ್ಲಿ ಮೋಹನ್ಲಾಲ್ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಈಗ ಹಲವು ಅವಕಾಶಗಳು ಅವರಿಗೆ ಸಿಗುತ್ತಿವೆ. ಒಂದು ಕನ್ನಡ ಮತ್ತು ಒಂದು ಹಿಂದಿ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದು ಶೀಘ್ರದಲ್ಲೇ ಆ ಬಗ್ಗೆ ಮಾಹಿತಿ ಹೊರಬೀಳಲಿದೆ.
For More Updates Join our WhatsApp Group :



