ಉತ್ತರ ಪ್ರದೇಶದಲ್ಲಿ 17 ವರ್ಷದ ಬಾಲಕಿಯ ಕ್ರೂರ ಹತ್ಯೆ
ಲಕ್ನೋ : ಯುವಕನೊಬ್ಬ ತನ್ನ ಗೆಳತಿಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಕೆಯ ಪ್ರಿಯಕರ ಮತ್ತವನ ಸ್ನೇಹಿತರು ಸೇರಿ ಈ ಕೃತ್ಯವೆಸಗಿದ್ದಾರೆ. ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು. ಆಕೆಗಿನ್ನು 17 ವರ್ಷ ವಯಸ್ಸು. ಶನಿವಾರ ರಾತ್ರಿ ಡಿಯೋರಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ಬಾಲಕಿಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನೌತನ್ ಹಥಿಯಾಗಢ ಗ್ರಾಮದ ನಿವಾಸಿ ಅಂಜಲಿಯನ್ನು ಶಿವಂ ಸಿಂಗ್ ಮತ್ತು ಅವರ ಸಹಚರರು ಆಕೆಯನ್ನು ಕೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ, ಬಾಲಕಿ ತನ್ನ ತಂಗಿ ಮತ್ತು ಸಹೋದರನೊಂದಿಗೆ ಸಹೋದರ್ ಪಟ್ಟಿ ಚೌಕ್ ಬಳಿ ಮೊಬೈಲ್ ಫೋನ್ ರಿಪೇರಿ ಮಾಡಿಸಲೆಂದು ಹೋಗಿದ್ದರು. ಬೈಕ್ನಲ್ಲಿ ಬಂದ ಇಬ್ಬರು ಯುವಕರು ಅವರನ್ನು ಥಳಿಸಲು ಶುರುಮಾಡಿದ್ದರು.
ಚಾಕುವನ್ನು ನೋಡಿ ಮಕ್ಕಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಆರೋಪಿಗಳು ಅವರನ್ನು ಗೋಧಿ ಹೊಲಕ್ಕೆ ಓಡಿಸಿ, ಬಾಲಕಿಯನ್ನು ಹಿಡಿದು, ಆಕೆಯ ಕುತ್ತಿಗೆಗೆ ಇರಿದಿದ್ದಾರೆ. ಸಹೋದರ ತಮ್ಮ ಮನೆಯ ಕಡೆಗೆ ಓಡಲು ಪ್ರಯತ್ನಿಸಿದಾಗ, ದಾಳಿಕೋರರು ಬಾಲಕಿಯ ಕತ್ತು ಸೀಳಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಕುಟುಂಬಸ್ಥರು ಸ್ಥಳಕ್ಕೆ ತಲುಪುವ ಹೊತ್ತಿಗೆ ಬಾಲಕಿ ಮೃತಪಟ್ಟಿದ್ದರು. ನಂತರ, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಕಳೆದ ನಾಲ್ಕು ವರ್ಷಗಳಿಂದ ಹುಡುಗಿ ಮತ್ತು ಸಿಂಗ್ ನಡುವೆ ಸಂಬಂಧವಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಪರಾರಿಯಾಗಿರುವ ಸಿಂಗ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕುಟುಂಬದ ದೂರಿನ ಆಧಾರದ ಮೇಲೆ, ಸಿಂಗ್ ಮತ್ತು ಅವರ ಸಹಚರನ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಕೊಲೆ ಪ್ರಕರಣ ದಾಖಲಿಸಲಾಗಿದೆ.
For More Updates Join our WhatsApp Group :




