5,8,9 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಈ ವರ್ಷ ‘ಪಬ್ಲಿಕ್ ಪರೀಕ್ಷೆ’ ಇಲ್ಲ

ಬೆಂಗಳೂರು : ರಾಜ್ಯದ 5,8,9 ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ಈ ವರ್ಷ ಪಬ್ಲಿಕ್ ಪರೀಕ್ಷೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಬೋರ್ಡ್ ಪರೀಕ್ಷೆ ಪ್ರಕರಣ ನ್ಯಾಯಾಲಯ ವಿಚಾರಣೆಯಲ್ಲಿ ಇರುವುದರಿಂದ 2024-25 ನೇ ಸಾಲಿನಲ್ಲಿ ಈ ಹಿಂದೆ ಇದ್ದಂತೆ ಎಲ್ಲಾ ತರಗತಿಗಳಿಗೂ ಮೌಲ್ಯಾಂಕನ ಪದ್ದತಿಯೇ ಮುಂದುವರೆಯಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

5, 8 ಮತ್ತು 9ನೇ ತರಗತಿಗಳ ಬೋರ್ಡ್ ಪರೀಕ್ಷೆಗಳನ್ನು ನ್ಯಾಯಾಲಯ ರದ್ದು ಮಾಡಿದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಈ ಹಿಂದೆ ಇದ್ದಂತೆ ಎಲ್ಲಾ ತರಗತಿಗಳಿಗೂ ಮೌಲ್ಯಾಂಕನ ಪರೀಕ್ಷೆ ಮುಂದುವರೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.

ರಾಜ್ಯ ಪಠ್ಯಕ್ರಮ ಅನುಸರಿಸುವ ರಾಜ್ಯ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು 2024 -25 ನೇ ಶೈಕ್ಷಣಿಕ ವರ್ಷದಿಂದ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಭಾಗ -1 ಮತ್ತು ಮತ್ತು ಭಾಗ -2ರ ಆಧಾರದಲ್ಲಿ ಮೌಲ್ಯಂಕನ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.

1-10 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ

ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದಿನಾಂಕ:29-05-2024 ರಿಂದ ಶೈಕ್ಷಣಿಕ ವರ್ಷವು ಪ್ರಾರಂಭವಾಗಿದೆ. 2022-23 ನೇ ಶೈಕ್ಷಣಿಕ ಸಾಲಿನಲ್ಲಿ ‘ಕಲಿಕಾ ಚೇತರಿಕೆ’ ಉಪಕ್ರಮವನ್ನು ಮತ್ತು 2023-24 ನೇ ಸಾಲಿನಲ್ಲಿ ‘ಕಲಿಕಾ ಬಲವರ್ಧನೆ’ ಕಾರ್ಯಕ್ರಮದಡಿ ಕಲಿವಿನ ಫಲಾಧಾರಿತ ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ ಹಾಗೂ ಶಿಕ್ಷಕರ ಚಟುವಟಿಕೆ ಕೋಶಗಳನ್ನು ಸಿದ್ಧಪಡಿಸಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಅಳವಡಿಸಿ ಕಲಿಕಾ ಅಂತರವನ್ನು ಬೆಸೆಯಲು ನಿರಂತರವಾಗಿ ಉಪಕ್ರಮಗಳನ್ನು ಅನುಷ್ಠಾನಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಸಜ್ಜುಗೊಳಿಸಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ‘ಸೇತುಬಂಧ’ ಕಾರ್ಯಕ್ರಮವನ್ನು ಜೂನ್ ತಿಂಗಳಿನಲ್ಲಿ ನಡೆಸುವುದು. 1 ರಿಂದ 10ನೇ ತರಗತಿಗಳಿಗೆ ಸೇತುಬಂಧ ಸಾಹಿತ್ಯವನ್ನು ಸಿದ್ಧಪಡಿಸಿ DSERT website ನಲ್ಲಿ ಅಳವಡಿಸಲಾಗಿದೆ. ಕಾರ್ಯಕ್ರಮ ಅನುಷ್ಠಾನಿಸುವ ಕುರಿತು ಸೇತುಬಂಧ ಸುತ್ತೋಲೆಯ ಮೂಲಕ ಮಾರ್ಗದರ್ಶನ ನೀಡಲಾಗಿದೆ.

ಶಾಲಾ ಬ್ಯಾಗ್ ಹೊರೆ ತಗ್ಗಿಸುವ ನಿಟ್ಟಿನಲ್ಲಿ 2024-25 ನೇ ಸಾಲಿನಲ್ಲಿ ಪಠ್ಯಪುಸ್ತಕಗಳನ್ನು ಭಾಗ-1 ಮತ್ತು ಭಾಗ-2 ರಂತೆ ಪ್ರತ್ಯೇಕವಾಗಿ ಮುದ್ರಿಸಲಾಗಿದೆ. ಭಾಗ-1 ರ ಪಠ್ಯ ಶೇ.50 ಹಾಗೂ ಭಾಗ-2 ರ ಪಠ್ಯ ಶೇ.50 ಒಟ್ಟು ಸೇರಿ ಶೇ.100 ರಷ್ಟು ಪಠ್ಯವನ್ನು ಮೌಲ್ಯಾಂಕನಕ್ಕೆ ಒಳಪಡಿಸುವ ವಿಧಾನವನ್ನು ನೀಡಲಾಗಿದ್ದು, ಅದರಂತೆ ಕ್ರಮವಹಿಸುವುದು.

ಉಲ್ಲೇಖಿತ ಸುತ್ತೋಲೆ ಹಾಗೂ 2024-25ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯನ್ನು ಆಧರಿಸಿ, ವಾರ್ಷಿಕ ಪಾಠ ಹಂಚಿಕೆ ಮಾಡಿಕೊಂಡು, ಕಲಿಕೆಯನ್ನು ಅನುಕೂಲಿಸುತ್ತಾ, ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಾಂಕನ ಕೈಗೊಂಡು, ಮಕ್ಕಳ ಕಲಿಕೆಯ ಪ್ರಗತಿಯನ್ನು ದಾಖಲಿಸಿಕೊಳ್ಳಬೇಕಾಗಿದೆ. ಈ ಸಂಬಂಧ ಮಕ್ಕಳ ಕಲಿಕೆಗೆ ಪೂರಕವಾಗಿ ಶಿಕ್ಷಕರು ಅಗತ್ಯ ಪೂರ್ವ ತಯಾರಿಯೊಂದಿಗೆ ವಾರ್ಷಿಕ ಕ್ರಿಯಾಯೋಜನೆಯನ್ನು ರೂಪಿಸಿಕೊಳ್ಳುವುದು.

.2024-2025ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸೇತುಬಂಧ ಕಾರ್ಯಕ್ರಮ, ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಮೌಲ್ಯಾಂಕನ ನಿರ್ವಹಿಸಲು ಅನುವಾಗುವಂತೆ ಮಾಹಿತಿಯನ್ನು ನೀಡಲಾಗಿರುತ್ತದೆ. ಅದರಂತೆ, ಶಾಲಾ ಹಂತದಲ್ಲಿ ನಿಗದಿತ ಕಾಲಾವಧಿಯೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕ್ರಮವಹಿಸುವುದು ಎಂದು ಸೂಚಿಸಿದೆ.

Leave a Reply

Your email address will not be published. Required fields are marked *