ದೇಶದ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ವಲಯದಲ್ಲಿ ಹೊಸ ನೇಮಕಾತಿಗಳು ಗಣನೀಯವಾಗಿ ಕುಗ್ಗಿದೆ. ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನದ ಪ್ರಭಾವ ಮತ್ತು ಅದರ ಮೇಲೆ ಗಮನ ಕೇಂದ್ರೀಕರಿಸುತ್ತಿರುವ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಇದು ನೇಮಕಾತಿಯಲ್ಲಿ ಇಳಿಕೆಯ ಜೊತೆಗೆ ಉದ್ಯೋಗಿಗಳ ಸಂಖ್ಯೆಯಲ್ಲೂ ಕಡಿತವಾಗಲು ಕಾರಣವಾಗುತ್ತಿದೆ.
ಇದರಿಂದ, ಕಳೆದ ಎರಡು ವರ್ಷಗಳಿಂದ ಐಟಿ ವಲಯದಲ್ಲಿ ಉದ್ಯೋಗ ನೇಮಕಾತಿಗಳು ಬಹುತೇಕ ಶೂನ್ಯವಾಗಿವೆ ಎಂದು ಕ್ವೆಸ್ ಸಂಸ್ಥೆ ಬಹಿರಂಗಪಡಿಸಿದೆ. ಭವಿಷ್ಯದಲ್ಲಿಯೂ ನೇಮಕಾತಿಗಳು ಮತ್ತೆ ಹೆಚ್ಚುವ ಭರವಸೆಯೂ ಕಾಣುತ್ತಿಲ್ಲ. ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡುತ್ತಿರುವುದು ಎಲ್ಲ ಐಟಿ ನೌಕರರು ಅಭದ್ರತೆಯ ಭಾವನೆಯಲ್ಲಿ ಕೆಲಸ ಮಾಡುವಂತಾಗಿದೆ ಎಂದು ವಿಶ್ಲೇಷಿಸಲಾಗಿದೆ.
ನೇಮಕಾತಿಗಳು ಬಹುತೇಕ ಶೂನ್ಯ: ದೇಶದ ಐಟಿ ವಲಯದಲ್ಲಿ ನೇಮಕಾತಿ ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ ಎರಡು ವರ್ಷಗಳಿಂದ ತಂತ್ರಜ್ಞಾನ ವಲಯದಲ್ಲಿ ನೇಮಕಾತಿಗಳು ಬಹುತೇಕ ಸ್ಥಗಿತಗೊಂಡಿವೆ. ಕಳೆದ ಆರರಿಂದ ಏಳು ತ್ರೈಮಾಸಿಕಗಳಲ್ಲಿ ಐಟಿ ವಲಯದಲ್ಲಿ ಉದ್ಯೋಗ ನೇಮಕಾತಿಗಳು ಬಹುತೇಕ ಶೂನ್ಯವಾಗಿವೆ ಎಂದು ಕ್ವೆಸ್ ಸಂಸ್ಥೆಯ ಸಿಇಒ ಗುರುಪ್ರಸಾದ್ ಶ್ರೀನಿವಾಸನ್ ಹೇಳಿದ್ದಾರೆ.
ಮುಂದಿನ ತ್ರೈಮಾಸಿಕದಲ್ಲಿಯೂ ಏರಿಕೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಐಟಿ ನೇಮಕಾತಿಗಳಲ್ಲಿ ಮಂದಗತಿಯ ಹೊರತಾಗಿಯೂ ಎಐ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸೈಬರ್ ಸೆಕ್ಯುರಿಟಿ ವಲಯಗಳಲ್ಲಿ ಬೇಡಿಕೆ ಹೆಚ್ಚಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳಾದ ಜಿಸಿಸಿ ಮತ್ತು ಐಟಿ ಅಲ್ಲದ ಕಂಪನಿಗಳಿಂದ ಬೇಡಿಕೆ ಹೆಚ್ಚಾಗಿ ಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಶೇಕಡಾ 73 ರಷ್ಟು ಸಿಬ್ಬಂದಿ ಬೇಡಿಕೆ ಈ ವಲಯಗಳಿಂದ ಬರುತ್ತಿದೆ. ಈ ತ್ರೈಮಾಸಿಕದಲ್ಲಿ ಹೆಚ್ಚಿನ ನೇಮಕಾತಿಯು ಉತ್ಪಾದನಾ ವಲಯದಲ್ಲಿ ನಡೆದಿದೆ. ನಂತರದಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ವಲಯವಿದೆ. ಚಿಲ್ಲರೆ ವ್ಯಾಪಾರ ಮತ್ತು ಟೆಲಿಕಾಂ ವಲಯಗಳಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ ಎಂದು ಶ್ರೀನಿವಾಸನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಬ್ಯಾಂಕಿಂಗ್, ಹಣಕಾಸು ಸೇವೆಗಳು, ವಿಮೆ-ಬಿಎಫ್ಎಸ್ಐ ವಲಯವು ಬೆಳೆಯುತ್ತಲೇ ಇದೆ ಎಂದಿರುವ ಅವರು, ಟೆಲಿಕಾಂ, ಉತ್ಪಾದನೆ ಮತ್ತು ತಂತ್ರಜ್ಞಾನ ವಲಯಗಳಲ್ಲಿಯೂ ಬೆಳವಣಿಗೆ ಮುಂದುವರೆದಿದೆ. ಅದೇ ಸಮಯದಲ್ಲಿ, ಸುಂಕ – ಸಂಬಂಧಿತ ಅನಾನುಕೂಲತೆಗಳಿಂದಾಗಿ ಫಾರ್ಮಾ, ಚಿಲ್ಲರೆ ವ್ಯಾಪಾರ, ಆಟೋ ಮತ್ತು ಉತ್ಪಾದನಾ ವಲಯಗಳು ತೀವ್ರ ಒತ್ತಡವನ್ನು ಎದುರಿಸುತ್ತಿವೆ ಎಂದು ಶ್ರೀನಿವಾಸನ್ ವಿವರಿಸಿದ್ದಾರೆ.