ರಾಮನಗರ: ನಾವು ಮೂಲ ಬೆಂಗಳೂರಿನವರು. ಹಿಂದೆ ನಾವು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜಿ.ಪಂ ಸದಸ್ಯ ಆಗಿದ್ದೆ. ನನ್ನ ಹೆಸರು ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್. ನನ್ನ ಹೆಸರು ಬದಲಾವಣೆ ಮಾಡಲು ಆಗುತ್ತದೆಯೇ..! ರಾಮನಗರ ಬೆಂಗಳೂರು ದಕ್ಷಿಣ ಜಿಲ್ಲೆಯಾದರೆ ವಿಶ್ವ ಮಟ್ಟದಲ್ಲಿ ಹೆಸರು ಬರಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಜಿಲ್ಲೆ ಹೆಸರು ಬದಲಾವಣೆ ಬಗ್ಗೆ ಮಾತನಾಡಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣ ನಡೆದ ಸರ್ಕಾರಿ ನೌಕರರ ಸಂಘದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ. ಆ ಗೌರವ ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿಗೂ ಸಿಗಬೇಕು ಎನ್ನುವುದೇ ನಮ್ಮ ಗುರಿಯಾಗಿದೆ. ಇದಕ್ಕಾಗಿ ಸಿಎಂ ಬಳಿ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ವಿಪಕ್ಷದವರು ಟೀಕೆ ಮಾಡುತ್ತಿದ್ದಾರೆ. ನಾನೇನು ರಿಯಲ್ ಎಸ್ಟೇಟ್ ಮಾಡಬೇಕಾಗಿಲ್ಲ ಎಂದರು.
ನನ್ನ ಆಸ್ತಿ ಮೌಲ್ಯ ಜೋರಾಗಿದೆ. ನಾನೇ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಜಮೀನು ದಾನ ಮಾಡಿದ್ದೇನೆ. ಅಧಿಕಾರ ಇದ್ದಾಗ ಜನರಿಗೆ ಏನಾದ್ರೂ ಮಾಡಬೇಕು. ಜನರಿಗೆ ತಮ್ಮ ಆಸ್ತಿ ಮೌಲ್ಯ ಹೆಚ್ಚಿಸಿ ಆರ್ಥಿಕ ಶಕ್ತಿ ತುಂಬಬೇಕು. ಹಾಗಾಗಿ ಜಿಲ್ಲೆಯ ಹೆಸರು ಬದಲಾವಣೆ ಮಾಡುತ್ತಿದ್ದೇವೆ. ಇದನ್ನ ಕ್ಯಾಬಿನೆಟ್ನಲ್ಲಿ ಸಿಎಂ ಚರ್ಚೆ ಮಾಡುತ್ತೇವೆ ಅಂದಿದ್ದಾರೆ. ರಾಮನಗರವನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೇ ಮಾಡುತ್ತೇವೆ. ರಾಮನಗರ ಜಿಲ್ಲಾ ಕೇಂದ್ರ ಇದ್ದೇ ಇರುತ್ತದೆ. ಹೆಸರು ಮಾತ್ರ ಬದಲಾವಣೆ ಆಗುತ್ತದೆ ಎಂದು ಡಿಸಿಎಂ ತಿಳಿಸಿದರು.