ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದು ನಿಜ: ತಪ್ಪೊಪ್ಪಿಕೊಂಡ ನಟ ದರ್ಶನ್

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಪಟಲಾಂ ಗ್ಯಾಂಗ್ ಜೈಲು ಸೇರಿದೆ. ಇನ್ನು ಇಂದು (ಸೆಪ್ಟೆಂಬರ್ 09) ಕೋರ್ಟ್ನಲ್ಲಿ ವಿಚಾರಣೆ ಇದ್ದು, ಇದಕ್ಕೂ ಮುನ್ನವೇ ದರ್ಶನ್ ಪೊಲೀಸರ ಮುಂದೆ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ರೆಸಾರ್ಟ್ ರೀತಿಯಲ್ಲೇ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆ ರೌಡ್ ಟೇಬಲ್ ಪಾರ್ಟಿ ಮಾಡಿದ್ದು, ಈ ವೇಳೆ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿತ್ತು. ಅಷ್ಟೇ ಅಲ್ಲದೇ, ವಿಐಪಿ ಸೆಲ್ನಿಂದಲೇ ವಿಡಿಯೋ ಕಾಲ್ನಲ್ಲಿ ಮಾತನಾಡಿರುವ ವಿಡಿಯೋ ಕೂಡ ವೈರಲ್ ಆಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಬಳಿಕ ಎಚ್ಚೆತ್ತುಕೊಂಡು ಸರ್ಕಾರ ಪರಪ್ಪನ ಅಗ್ರಹಾರದ 9 ಜೈಲಾಧಿಕಾರಿಗಳನ್ನು ಅಮಾನತು ಮಾಡಿದ್ದು, ಕೋರ್ಟ್ ಆದೇಶದ ಮೇರೆಗೆ ಪೊಲೀಸರು ನಟ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದರು. ಇನ್ನು ಇದೀಗ ಇಂದು (ಸೆಪ್ಟೆಂಬರ್ 09) ಕೋರ್ಟ್ನಲ್ಲಿ ಪ್ರಕರಣದ ಅರ್ಜಿ ವಿಚಾರಣೆ ಇದ್ದು, ಚಾರ್ಜ್ಶೀಟ್ನಲ್ಲಿ ಗೌಪ್ಯತ್ಯಯನ್ನು ಬಹಿರಂಗಪಡಿಸಬೇಡಿ ಅಂತಲೂ ರಿಟ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ನಟ ದರ್ಶನ್ ಹೇಳಿದ್ದೇನು?: ಇದರ ನಡುವೆಯೇ ನಟ ದರ್ಶನ್ ಪೊಲೀಸರ ಮುಂದೆ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಶೂನಿಂದ ಒದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ.

ರೇಣುಕಾಸ್ವಾಮಿಗೆ ಕೈನಿಂದ ಹೊಡೆದೆ, ಕಾಲಿನಿಂದ ಎದೆ, ಕುತ್ತಿಗೆ, ತಲೆಗೆ ಬಲವಾಗಿ ಹೊಡೆದೆ. ಬಾಗಿದ್ದ ಮರದ ಕೊಂಬೆ ಮುರಿದು ಅದರಲ್ಲೂ ಆತನಿಗೆ ಹೊಡೆದೆ. ನನ್ನ ಕೈಗಳಿಂದಲೂ ಆತನಿಗೆ ನಾನು ಒಂದೆರಡು ಏಟು ಗುದ್ದಿದೆ. ನಂತರ ಕಾರಿನಲ್ಲಿ ಕುಳಿತಿದ್ದ ಪವಿತ್ರಾಳನ್ನ ಕರೆತರಲು ಹೇಳಿದೆ. ನೋಡು ನೀನು ಮೆಸೇಜ್ ಮಾಡುತ್ತಿದ್ದವಳು ಇವಳೇನೆ ಅಂತಾ ಆತನಿಗೆ ಕೇಳಿದೆ ಎಂದು ನಟ ದರ್ಶನ್ ಸ್ವಿಚ್ಛಾ ಹೇಳಿಕೆ ದಾಖಲಿಸಿದ್ದಾರೆ.

ಇನ್ನು ನಟ ದರ್ಶನ್ ಮತ್ತು ಗ್ಯಾಂಗ್ಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಕೋರ್ಟ್ ಸೋಮವಾರ ಆದೇಶ ಹೊರಡಿಸಿದೆ. ನಟ ದರ್ಶನ್ ಸೇರಿ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಲಯ ಸೆಪ್ಟೆಂಬರ್ 12ರ ವರೆಗೆ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ.

ನಟ ದರ್ಶನ್ ಅವರು ಬಳ್ಳಾರಿ ಜೈಲಿನಿಂದ ವಿಚಾರಣೆಗೆ ಹಾಜರಾಗಿದ್ದು, ಪವಿತ್ರಾ ಗೌಡ ಬೆಂಗಳೂರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದರು. ಅದೇ ರೀತಿ ಈ ಪ್ರಕರಣದಲ್ಲಿ ಬೇರೆ ಬೇರೆ ಜೈಲು ಸೇರಿರುವ ಎಲ್ಲಾ ಆರೋಪಿಗಳು ವಿಚಾರಣೆ ಹಾಜರಾಗಿದ್ದರು.

ಪವಿತ್ರಾಗೌಡ ಜೊತೆ ಸುಮಾರು 10 ವರ್ಷಗಳಿಂದ ನಾನು ಲೀವ್ ಇನ್ ರಿಲೇಷನ್ಷಿಪ್ನಲ್ಲಿದ್ದೇನೆ. ಪವಿತ್ರಾ ಗೌಡ ಆರ್ಆರ್ನಗರದಲ್ಲಿನ ನನ್ನ ಮೇಲಿನ ವಿಳಾಸದ ಮನೆಯಿಂದ ಸುಮಾರು ಒಂದುವರೆ ಕಿಲೋ ಮೀಟರ್ ದೂರದಲ್ಲಿ ನೆಲೆಸಿದ್ದಾರೆ.

ನನಗೆ ಜೆಟ್ಲ್ಯಾಗ್ ಪಬ್ನ ಮಾಲೀಕರಾದ ದಿವಂಗತ ಸೌಂದರ್ಯ ಜಗದೀಶ್ ಅವರು ಸುಮಾರು 10 ವರ್ಷಗಳಿಂದ ಪರಿಚಯವಿದ್ದಾರೆ. 2018ರಲ್ಲಿ ನಾನು ಪವಿತ್ರಾ ಗೌಡಗೆ ಮನೆಯನ್ನು ಖರೀದಿಸಲು ಸ್ನೇಹಿತರಾದ ಸೌಂದರ್ಯ ಜಗದೀಶ್ ಅವರಿಂದ 1.75 ಕೋಟಿ ರೂಪಾಯಿ ಸಾಲವನ್ನು ಪಡೆದಿದ್ದೆ. ಈ ಹಣವನ್ನು ನಾನು ಪವಿತ್ರಾ ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಹಿಸಿದ್ದೆ. ಈ ಸಾಲದ ಹಣವನ್ನು 2 ವರ್ಷದ ಹಿಂದೆ ಸೌಂದರ್ಯ ಜಗದೀಶ್ ಅವರಿಗೆ ನನ್ನ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿರುತ್ತೇನೆ. ಈ ಹಣವ ಸಿನಿಮಾ ನಟನೆಗೆ ಪಡೆದ ಸಂಭಾವನೆ ಆಗಿರುತ್ತದೆ ಎಂದು ಹೇಳಿದ್ದಾರೆ ಅಂತಾ ಉಲ್ಲೇಖವಾಗಿದೆ.

Leave a Reply

Your email address will not be published. Required fields are marked *