ಬ್ಯಾಂಕ್ ನೌಕರರ ಮುಷ್ಕರ ಹಾಗೂ ಗಣರಾಜ್ಯೋತ್ಸವ
ನವದೆಹಲಿ: ಬ್ಯಾಂಕುಗಳು ನಾಳೆಯಿಂದ ಸತತ ನಾಲ್ಕು ದಿನ ಬಂದ್ ಆಗಿರುತ್ತವೆ. ಜನವರಿ 24, ಶನಿವಾರದಿಂದ ಜನವರಿ 27, ಮಂಗಳವಾರದವರೆಗೂ ಬ್ಯಾಂಕುಗಳ ಬಾಗಿಲು ಮುಚ್ಚಲಾಗಿರುತ್ತದೆ. ತುರ್ತಾಗಿ ಬ್ಯಾಂಕ್ ಕೆಲಸ ಇದ್ದವರು ಇವತ್ತಿಗೇ ಪ್ಲಾನ್ ಮಾಡಿಕೊಳ್ಳಬಹುದು. ಬ್ಯಾಂಕ್ ನೌಕರರ ಮುಷ್ಕರ ಹಾಗೂ ಗಣರಾಜ್ಯೋತ್ಸವ ಇರುವ ಹಿನ್ನೆಲೆಯಲ್ಲಿ ಸತತ ನಾಲ್ಕು ದಿನ ಬ್ಯಾಂಕುಗಳಿಗೆ ರಜೆ ಇದೆ.
ಬ್ಯಾಂಕುಗಳಿಗೆ ರಜೆ
- ಜ. 24: ನಾಲ್ಕನೇ ಶನಿವಾರದ ಪ್ರಯುಕ್ತ ರಜೆ
- ಜ. 25: ಭಾನುವಾರದ ರಜೆ
- ಜ. 26, ಸೋಮವಾರ: ಗಣರಾಜ್ಯೋತ್ಸವ ಅಂಗವಾಗಿ ರಜೆ
- ಜ. 27, ಮಂಗಳವಾರ: ಬ್ಯಾಂಕ್ ನೌಕರರ ದೇಶವ್ಯಾಪಿ ಮುಷ್ಕರ.
ಜನವರಿ 24ರಿಂದ 27ರವರೆಗೂ ದೇಶವ್ಯಾಪಿ ಎಲ್ಲಾ ಬ್ಯಾಂಕುಗಳಿಗೂ ರಜೆ ಅನ್ವಯ ಆಗುತ್ತದೆ. ಬ್ಯಾಂಕ್ ನೌಕರರನ್ನು ಸಮಾಧಾನಗೊಳಿಸಿ ಮುಷ್ಕರ ನಿಲ್ಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ನಿನ್ನೆ (ಜ. 22) ಕೂಡ ದೆಹಲಿಯಲ್ಲಿ ಸಂಧಾನ ಸಭೆ ನಡೆಯಿತು. ಆದರೂ ಕೂಡ ರಾಜಿ ಅಥವಾ ಪರಿಹಾರ ಬರಲಿಲ್ಲ. ಇವತ್ತೂ ಕೂಡ ಮಾತುಕತೆಗಳು ನಡೆಯಲಿವೆ. ಸಂಜೆ ಈ ಸಂಧಾನ ಯಶಸ್ವಿಯಾಗಿ ನೌಕರರ ಸಂಘ ಸಮಾಧಾನಗೊಂಡರೆ ಜನವರಿ 27ರಂದು ಮುಷ್ಕರವನ್ನು ಕೈಬಿಡಲಾಗಬಹುದು. ಇಲ್ಲದಿದ್ದರೆ ಮಂಗಳವಾರವೂ ಬ್ಯಾಂಕ್ ಬಂದ್ ಆಗಿರುತ್ತದೆ.
ಬ್ಯಾಂಕ್ ನೌಕರರ ಮುಷ್ಕರಕ್ಕೆ ಬೇಡಿಕೆಗಳೇನು?
ಕೆಲ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಇರುವಂತೆ ಬ್ಯಾಂಕುಗಳಲ್ಲೂ ವಾರಕ್ಕೆ ಐದು ದಿನ ಕೆಲಸದ ನಿಯಮ ತರಬೇಕೆಂಬುದು ನೌಕರರ ಪ್ರಮುಖ ಒತ್ತಾಯವಾಗಿದೆ. ಸದ್ಯ ಪ್ರತೀ ಭಾನುವಾರ ರಜೆ ಇದೆ. ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜೆ ಇದೆ. ಈಗ ಎಲ್ಲಾ ಶನಿವಾರ ಮತ್ತು ಭಾನುವಾರಗಳನ್ನು ರಜೆಯಾಗಿ ಮಾಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಆಗ್ರಹವಾಗಿದೆ. ಬಹಳ ದಿನಗಳಿಂದ ಅವರು ಈ ಬೇಡಿಕೆ ಮುಂದಿಟ್ಟಿದ್ದಾರೆ.
For More Updates Join our WhatsApp Group :




