ದಳಪತಿ ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಮ್’ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಲು ರೆಡಿ ಆಗಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಲಿದ್ದಾರೆ. ಇದಕ್ಕಾಗಿ ವಿವಿಧ ಕಡೆಗಳಲ್ಲಿ ರ್ಯಾಲಿ ಮಾಡುತ್ತಿದ್ದಾರೆ. ಈ ವೇಳೆ ಲಕ್ಷಾಂತರ ಜನರು ಸೇರುತ್ತಿದ್ದಾರೆ. ಇದರಿಂದ ವಿಜಯ್ ಚುನಾವಣೆಯಲ್ಲಿ ಗೆಲ್ಲೋದು ನಿಶ್ಚಿತ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ. ರ್ಯಾಲಿಗೆ ಬಂದವರೆಲ್ಲರೂ ನಿಮಗೆ ವೋಟ್ ಹಾಕುವುದಿಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ. ಇದು ವಿಜಯ್ಗೆ ಮಾತ್ರವಲ್ಲ, ತಮಗೂ ಅನ್ವಯ ಆಗುತ್ತದೆ ಎಂದಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡುವಾಗ ವಿಜಯ್ ಹಮ್ಮಿಕೊಂಡಿದ್ದ ರ್ಯಾಲಿ ವಿಚಾರ ಬಂದಿದೆ. ಈ ವೇಳೆ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಇಡೀ ಸಮೂಹವು ವಿಜಯ್ಗೆ ವೋಟ್ ಮಾಡೋದಿಲ್ಲ. ಅರ್ಥಾತ್, ಎಲ್ಲವೂ ಮತವಾಗಿ ಮಾರ್ಪಡುವುದಿಲ್ಲ. ಇದು ಎಲ್ಲಾ ನಾಯಕರಿಗೂ ಅನ್ವಯ ಆಗುತ್ತದೆ’ ಎಂದು ಅವರು ಹೇಳಿದ್ದಾರೆ.
ಟಿವಿಕೆ ಮುಖ್ಯಸ್ಥ ವಿಜಯ್ಗೂ ಈ ನಿಯಮ ಅನ್ವಯ ಆಗುತ್ತದೆಯೇ ಎಂದು ಕೇಳಲಾಯಿತು. ‘ಎಲ್ಲಾ ನಾಯಕರು ಎಂದು ನಾನು ಹೇಳಿರುವಾಗ, ವಿಜಯ್ ಅವರನ್ನು ಬಿಡಲು ಹೇಗೆ ಸಾಧ್ಯ? ನನ್ನನ್ನು ಸೇರಿದಂತೆ ದೇಶದ ಪ್ರತಿ ನಾಯಕನಿಗೂ ಇದು ಅನ್ವಯ ಆಗುತ್ತದೆ. ನೀವು ಜನರನ್ನು ಸೆಳೆಯಬಹುದು ಆದರೆ ಅದನ್ನು ಮತವಾಗಿ ಬದಲಾಯಿಸಲು ಸಾಧ್ಯವಿಲ್ಲ’ ಎಂದಿದ್ದಾರೆ. ‘ಸರಿಯಾದ ಹಾದಿಯಲ್ಲಿ ಹೋಗಿ. ಧೈರ್ಯದಿಂದ ಮುಂದುವರಿಯಿರಿ ಮತ್ತು ಜನರಿಗೆ ಒಳ್ಳೆಯದನ್ನು ಮಾಡಿ. ಇದು ಎಲ್ಲಾ ನಾಯಕರಿಗೆ ನನ್ನ ಮನವಿ’ ಎಂದು ಹೇಳಿದ್ದಾರೆ ಕಮಲ್.
ಕಮಲ್ ಹಾಸನ್ ಹೇಳಿದ್ದು ಅಕ್ಷರಶಃ ಸತ್ಯ ಕೂಡ ಹೌದು. ಈ ಮೊದಲು ಚಿರಂಜೀವಿ ಅವರು ರಾಜಕೀಯ ಪಕ್ಷ ಸ್ಥಾಪಿಸಿ ದೊಡ್ಡ ಸಭೆ ಆಯೋಜನೆ ಮಾಡಿದಾಗ ಲಕ್ಷಾಂತರ ಜನರು ಬಂದಿದ್ದರು. ಆದರೆ, ಅವರು ಚುನಾವಣೆಯಲ್ಲಿ ಸೋತರು. ಆ ಬಳಿಕ ಅವರು ರಾಜಕೀಯ ತೊರೆದರು. ಹೀರೋ ಆಗಿ ಅಪಾರ ಜನಪ್ರಿಯತೆ ಪಡೆದಿದ್ದ ಪವನ್ ಕಲ್ಯಾಣ್ ಈ ಹಿಂದಿನ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡೂ ಕ್ಷೇತ್ರದಲ್ಲಿ ಸೋತಿದ್ದರು. ಸ್ವತಃ ಕಮಲ್ ಹಾಸನ್ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾರೆ.
For More Updates Join our WhatsApp Group :https://chat.whatsapp.com/JVoHqE476Wn3pVh1gWNAcH

