ನವದೆಹಲಿ: ಏಪ್ರಿಲ್ 22 ರ ಪಹಲ್ಗಾಮ್ ನಡೆದ ಉಗ್ರರ ದಾಳಿಯ ನಂತರ ವೈರಿ ರಾಷ್ಟ್ರ ಪಾಕಿಸ್ತಾನದ ಹೆಡೆಮುರಿ ಕಟ್ಟಲು ಉಗ್ರರ ಮಗ್ಗಲು ಮುರಿಯಲು ಕಾದು ಕುಳಿತಿದ್ದ ಭಾರತೀಯ ಸೇನೆ ಕೊನೆಗೂ ತನ್ನ ರಣಬೇಟೆ ಆರಂಭಿಸಿದೆ.
ಬುಧವಾರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ, ಜೈಶ್- ಎ- ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಪ್ರಭಾವ ಹೆಚ್ಚಿರುವ ಬಹಲ್ವಾಪುರದಲ್ಲಿ ಒಂಬತ್ತು ಶಿಬಿರಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದೆ.
ಆಪರೇಷನ್ ಸಿಂಧೂರ ಹೆಸರಿನಲ್ಲಿ ಈ ರಣಬೇಟೆ ನಡೆದಿರುವ ಬಗ್ಗೆ ಭಾರತೀಯ ಸೇನೆ ನಸುಕಿನಜಾವ 1:44ಕ್ಕೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ

.”ನ್ಯಾಯ ದೊರಕಿತು: ಭಾರತ ‘ಆಪರೇಷನ್ ಸಿಂಧೂರ್’ ಆರಂಭವಾಗಿದೆ; ಪಿಒಜೆಕೆಯಲ್ಲಿ 9 ಭಯೋತ್ಪಾದಕ ಶಿಬಿರಗಳ ಮೇಲೆ ನಿಖರ ದಾಳಿ ನಡೆದಿದೆ” ಎಂದು ಭಾರತೀಯ ಸೇನೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಕೇಂದ್ರ ಸರ್ಕಾರದಿಂದಲೂ ಮಾಹಿತಿ: ಭಾರತೀಯ ಸಶಸ್ತ್ರ ಪಡೆಗಳು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ದಾಳಿ ನಡೆಸಿವೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪಾಕಿಸ್ತಾನದಲ್ಲಿ ಉಗ್ರರ 9 ಶಿಬಿರಗಳನ್ನು ಗುರಿಯಾಗಿಸಿಕೊಂಡು ನಿಖರ ದಾಳಿ ನಡೆದಿದೆ, ನಮ್ಮ ಸೇನೆ ಉಗ್ರರ ಮೂಲಸೌಲಭ್ಯಗಳನ್ನು ನೆಲಸಮ ಮಾಡುವಲ್ಲಿ ಯಶಸ್ವಿಯಾಗಿದೆ. ಆದ್ರೆ ಯಾವುದೇ ನಾಗರಿಕ ಸ್ಥಳಗಳು, ಆರ್ಥಿಕ ಕಟ್ಟಡಗಳು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿಲ್ಲವೆಂದು ಸ್ಪಷ್ಟಪಡಿಸಿದೆ.
ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆಸಿದ ಅಟ್ಟಹಾಸಕ್ಕೆ ಪ್ರತೀಕಾರವಾಗಿ ಇಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಲಾಗಿದೆ. ಆ ದಿನ ಪಹಲ್ಗಾಮಮ್ನಲ್ಲಿ 25 ಜನ ಭಾರತೀಯ ಪ್ರವಾಸಿಗರು ಮತ್ತು ಓರ್ವ ನೇಪಾಳಿ ಪ್ರಜೆ ಮೇಲೆ ನಿರ್ದಯವಾಗಿ ಭಯೋತ್ಪಾದಕರು ಗುಂಡಿನ ಮಳೆಗರಿದಿದ್ದರು. ಅದಕ್ಕೆ ಪ್ರತೀಕಾರವಾಗಿ ಉಗ್ರರನ್ನು ಹೆಡೆಮುರಿ ಕಟ್ಟಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಯಾವುದೇ ನಾಗರಿಕರು, ಆರ್ಥಿಕ ಸ್ಥಳ ಅಥವಾ ಪಾಕ್ ಸೇನೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿಲ್ಲ. ಇದು ಕೇವಲ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿ ಎಂದು ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ದಾಳಿಯ ಕುರಿತಂತೆ ಸ್ಪಷ್ಟನೆ ನೀಡಿದೆ.
ಎಲ್ಒಸಿ ಉದ್ದಕ್ಕೂ ಪಾಕ್ ಪಡೆಗಳಿಂದ ಭಾರಿ ಶೆಲ್ ದಾಳಿ: ತಾಯಿ–ಮಗಳಿಗೆ ಗಂಭೀರ ಗಾಯ
ಬುಧವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಉದ್ದಕ್ಕೂ ಇರುವ ಹಳ್ಳಿಗಳ ಮೇಲೆ ಪಾಕ್ ಸೇನೆ ಭಾರಿ ಪ್ರಮಾಣದಲ್ಲಿ ಮೋರ್ಟಾರ್ ಶೆಲ್ ದಾಳಿ ನಡೆಸಿದೆ.
ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನದ ಸೈನಿಕರ ದಾಳಿಯಿಂದ ಒಬ್ಬ ಮಹಿಳೆ ಮತ್ತು ಅವರ ಮಗಳು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ದಾಳಿಯ ಕೆಲ ಹೊತ್ತಿನ ಬಳಿಕ, ಗಡಿಯುದ್ದಕ್ಕೂ ತೀವ್ರವಾದ ಶೆಲ್ ದಾಳಿ ಪೂಂಚ್ನ ಕೃಷ್ಣ ಘಾಟಿ, ಶಹಪುರ್ ಮತ್ತು ಮಂಕೋಟೆ, ಜಮ್ಮು ಪ್ರದೇಶದ ರಾಜೌರಿ ಜಿಲ್ಲೆಯ ಲಾಮ್, ಮಂಜಕೋಟೆ ಮತ್ತು ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕರ್ನಾ ಪ್ರದೇಶದಿಂದ ವರದಿಯಾಗಿದೆ ಎಂದು ಅವರು ಹೇಳಿದರು. ಮಂಕೋಟೆಯಿಂದ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.