ರಾಯಚೂರು : ದಿನದಿನೇ ಮನೆಗಳಲ್ಲಿ ಕಳ್ಳತನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಇದೀಗ ಗ್ಯಾಂಗ್ವೊಂದು ಮನೆಯವರನ್ನು ಕಟ್ಟಿಹಾಕಿ ದರೋಡೆ ನಡೆಸಿರುವ ಘಟನೆ ತಡರಾತ್ರಿ ರಾಯಚೂರಲ್ಲಿ ನಡೆದಿದೆ. ಲಕ್ಷ್ಮಿ ನರಸಿಂಹ ಲೇಔಟ್ನಲ್ಲಿರುವ ಬಸವನಗೌಡ ಎನ್ನುವರ ಮನೆಯ ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ ಖದೀಮರು ದರೋಡೆ ನಡೆಸಿದ್ದಾರೆ.
ಮೊದಲೇ ಎಲ್ಲವನ್ನೂ ಪ್ಲ್ಯಾನ್ ಮಾಡಿ ದರೋಡೆಗೆ ನುಗ್ಗುವ ಮುನ್ನ ಅಕ್ಕಪಕ್ಕದ ಮನೆಗಳಿಗೆ ಹೊರಗಿಂದ ಲಾಕ್ ಮಾಡಿದ್ದಾರೆ. ರಸ್ತೆಯಲ್ಲಿನ, ಮನೆಗಳ ಮುಂದಿನ ಲೈಟ್ಗಳನ್ನು ಆಫ್ ಮಾಡಿ, ಮನೆ ಬಾಗಿಲು ಮುರಿದು ಒಳ ನುಗ್ಗಿದ್ದಾರೆ.
ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಬಳಿಕ ಮನೆಯಲ್ಲಿನ 220 ಗ್ರಾಂ ಬಂಗಾರ, 2 ಕೆಜಿ ಬೆಳ್ಳಿ, 2 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಆದರೆ ಸಿಸಿ ಕ್ಯಾಮೆರಾದಲ್ಲಿ ಖದೀಮರ ಚಲನವಲನ ಸೆರೆಯಾಗಿದೆ.
ಘಟನಾ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.