ಕಾರವಾರ: ಪಾರ್ಶ್ವವಾಯು ಪೀಡಿತ ತಂದೆಗೆ ಚಿಕಿತ್ಸೆ ಕೊಡಿಸಲು ಬಂದ ಮಹಿಳೆಯೋರ್ವಳು ತಾನು ಪಾರ್ಶ್ವವಾಯು ಬರದಂತೆ ಮುಂಚೆಯೇ ನೀಡುವ ಇಂಜೆಕ್ಷನ್ ಪಡೆದು ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕಾರವಾರ ತಾಲೂಕಿನ ಹಳಗಾದ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.
ಕೊಪ್ಪಳ ಮೂಲದ ಸ್ವಪ್ನ ರಾಯ್ಕರ್ (32) ಮೃತ ಮಹಿಳೆ. ಸ್ವಪ್ನ ಕುಟುಂಬದ ಜತೆ ಗೋವಾ ಹಾಗೂ ಉತ್ತರ ಕನ್ನಡ ಪ್ರವಾಸಕ್ಕಾಗಿ ಅವರು ಆಗಮಿಸಿದ್ದುರು. ಗೋವಾದ ಕಾಮಾಕ್ಷಿ ದೇವಸ್ಥಾನಕ್ಕೆ ತೆರಳಿ ಸೋಮವಾರ ಕಾರವಾರಕ್ಕೆ ಆಗಮಿಸಿದ್ದರು. ಮಹಿಳೆಯ ತಂದೆಗೆ ಎರಡು ವರ್ಷದ ಹಿಂದೆ ಪ್ಯಾರಲಿಸಿಸ್ ಆಗಿದ್ದು ಹಳಗ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದರು.
ಈ ಹಿನ್ನೆಲೆ ಆಸ್ಪತ್ರೆಗೆ ಭೇಟಿ ನೀಡಿ ತಂದೆಗೆ ಆರೋಗ್ಯವನ್ನು ವೈದ್ಯರ ಬಳಿ ತೋರಿಸಲು ಮಹಿಳೆ ಮುಂದಾಗಿದ್ದಳು. ಇದೇ ವೇಳೆ ಆಕೆ ತನಗೆ ಆಗಾಗ ಕಾಡುತ್ತಿದ್ದ ಬೆನ್ನು ನೋವಿನ ಬಗ್ಗೆ ಹೇಳಿಕೊಂಡಿದ್ದಾಳೆ. ಈ ವೇಳೆ ಪ್ಯಾರಲಿಸಿಸ್ಗೆ ಮುಂಜಾಗ್ರತೆಗಾಗಿ ಇಂಜೆಕ್ಷನ್ ತೆಗೆದುಕೊಳ್ಳಲು ವೈದ್ಯರು ತಿಳಿಸಿದ್ದರು ಎನ್ನಲಾಗಿದೆ. ವೈದ್ಯರ ಸೂಚನೆ ಮೇರೆಗೆ ಮಹಿಳೆ ಇಂಜೆಕ್ಷನ್ ಪಡೆದ ಒಂದೇ ನಿಮಿಷದಲ್ಲಿ ಕೂಗಿ ಕುಸಿದು ಬಿದ್ದಿದ್ದಳು. ತಕ್ಷಣ ಆಕೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು.
ಆದರೆ ಕುಸಿದುಬಿದ್ದ ವೇಳೆಯಲ್ಲಿಯೇ ಮಹಿಳೆಯ ಮೆದುಳು ನಿಷ್ಕ್ರಿಯವಾಗಿದ್ದು, ಆಕೆ ಮೃತಪಟ್ಟಿರುವುದಾಗಿ ಆಸ್ಪತ್ರೆಯಲ್ಲಿ ತಿಳಿಸಿದ್ದಾರೆ. ಮಹಿಳೆ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಸುಮ್ಮನೇ ಇಂಜೆಕ್ಷನ್ ತೆಗೆದುಕೊಂಡು ಸಾವು ತಂದುಕೊಂಡೆವು ಎಂದು ಕುಟುಂಬಸ್ಥರು ರೋದಿಸುತ್ತಿದ್ದರು.
“ನನಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದೆ. ಬೆನ್ನು ನೋವು ಎಂದು ಮಗಳು ವೈದ್ಯರ ಬಳಿ ತೋರಿಸಿದಾಗ ವೈದ್ಯರು ಪ್ಯಾರಲಿಸಿಸ್ ಬರದಂತೆ ಮುಂಚೆಯೇ ಚುಚ್ಚುಮದ್ದು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ ನನ್ನ ಮಗಳು ಇಂಜೆಕ್ಷನ್ ಕೊಡುತ್ತಿದ್ದಂತೆ ಪಪ್ಪಾ ಎಂದು ಹೇಳಿ ಕುಸಿದು ಬಿದ್ದಳು. ಮಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ವೈದ್ಯರೇ ಇಂಜೆಕ್ಷನ್ ತೆಗೆದುಕೊಳ್ಳಿ ಎಂದು ಹೇಳಿದ್ದರು. ನಂತರ ಅವರೇ ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ತಂದಿದ್ದಾರೆ” ಎಂದು ಮೃತ ಮಹಿಳೆಯ ತಂದೆ ಕೇಶವ ಪಾವಸ್ಕರ್ ತಿಳಿಸಿದ್ದಾರೆ.
Pragati TV Social Connect for more latest u