ಬೆಂಗಳೂರು : ಲವರ್ಸ್ ಜೊತೆ ಗೋವಾಕ್ಕೆ ಹೋಗಲು ಹಣ ಇಲ್ಲದೆ ಕಳ್ಳತನ ಹಾದಿ ಹಿಡಿದಿದ್ದ ಮೂವರು ವಿದ್ಯಾರ್ಥಿಗಳನ್ನು ಬೆಂಗಳೂರಿನ ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ. ಬಿಕಾಂ ವಿದ್ಯಾರ್ಥಿಗಳಾದ ಯಶವಂತ್, ರಮೇಶ್, ತನುಷ್ ಆರೋಪಿಗಳು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಾರೆ. ಆರೋಪಿಗಳು ತಮ್ಮ ಲವರ್ಸ್ ಜೊತೆ ಗೋವಾಕ್ಕೆ ಹೋಗಿ ಮೋಜು ಮಸ್ತಿ ಮಾಡಬೇಕೆಂದು ಅಂದುಕೊಂಡಿದ್ದರು. ಆದರೆ, ಗೋವಾಕ್ಕೆ ಹೋಗಲು ಆರೋಪಿಗಳ ಬಳಿ ಹಣ ಇರಲಿಲ್ಲ.
ಹೀಗಾಗಿ, ಆರೋಪಿಗಳು ಪರಿಚಯಸ್ಥ ಶ್ರೀನಿವಾಸ್ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಕಳ್ಳತನದ ಹಣದಲ್ಲಿ ಮೂವರೂ ತಮ್ಮ ಲವರ್ಸ್ ಜೊತೆ ಗೋವಾಗೆ ಹೋಗಿ ಮೋಜು ಮಸ್ತಿ ಮಾಡಿದ್ದಾರೆ. ಲವರ್ಸ್ ಜೊತೆ ಮೋಜು ಮಸ್ತಿ ಮಾಡಿ, ಆರೋಪಿಗಳು ಬೆಂಗಳೂರಿಗೆ ಬರುತ್ತಿದ್ದಂತೆ ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು ಅರ್ಧ ಕೆಜಿಗೂ ಹೆಚ್ಚು ಚಿನ್ನಾಭರಣ, 10 ಲಕ್ಷ ನಗದು ಜಪ್ತಿ ಮಾಡಿಕೊಂಡಿದ್ದಾರೆ.
ಪಿಕ್ ಪಾಕೆಟ್ ಮಾಡ್ತಿದ್ದ ಮಹಿಳೆಯರ ಬಂಧನ
ಬುರ್ಖಾ ಧರಿಸಿ ಬಸ್ನಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ನಾಲ್ವರು ಮಹಿಳೆಯರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಮೂಲದ ಪದ್ಮ, ಅನು ಮತ್ತು ಪ್ರಾರ್ಥನಾ ಬಂಧಿತ ಆರೋಪಿಗಳು. ಬಂಧಿತ ನಾಲ್ವರು ಆರೋಪಿಗಳ ಬಳಿ ಇದ್ದ 190 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಹತ್ತುವ ಮಹಿಳೆಯರನ್ನೇ ಟಾರ್ಗೇಟ್ ಮಾಡುತ್ತಿದ್ದರು. ಮಹಿಳೆಯರು ಬಸ್ ಹತ್ತುವಾಗ ಆರೋಪಿಗಳು ಅವರ ಬ್ಯಾಗ್ ಜಿಪ್ ತೆರೆದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.