ಮಳೆಯೆಂದರೆ ಕೆಲವರಿಗೆ ತುಂಬಾ ಇಷ್ಟ. ಇನ್ನು ಕೆಲವರಿಗೆ ಕಷ್ಟ. ಆದರೆ ಮಳೆ ನಮ್ಮ ಧರೆಗೆ ಅತ್ಯಗತ್ಯ. ಇದು ಎಲ್ಲರಿಗೂ ತಿಳಿದ ವಿಚಾರ. ಈ ರೀತಿ ವರ್ಷದಲ್ಲಿ ನಿಗದಿಯಾದ ದಿನದಲ್ಲಿ ಬರುವ ಮಳೆಗೆ ದೇವರ ಸ್ಥಾನಮಾನ ನೀಡಲಾಗಿದೆ. ಅದರಲ್ಲಿಯೂ ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲನೆಯ ವಾರದಲ್ಲಿ ಬರುವ ಮಳೆಗೆ ಎಲ್ಲಿಲ್ಲದ ಬೇಡಿಕೆ. ಹೌದು, ಇದನ್ನು ಸ್ವಾತಿ ಮಳೆ ಎಂದು ಕರೆಯಲಾಗುತ್ತದೆ. ಈ ಭಾರಿ ಅ. 24 ರಿಂದ ನ. 5 ರ ವೆರೆಗೆ ಈ ಮಳೆ ಬೀಳಲಿದೆ. ಇನ್ನು ಈ ದಿನಗಳಲ್ಲಿ ಮಳೆ ಬಂದೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲವಾದರೂ ಕೂಡ ಇದರ ಬರುವಿಕೆಗಾಗಿ ಜನ ಸಿದ್ಧತೆ ಮಾಡಿಕೊಳ್ಳದೆಯೂ ಇರುವುದಿಲ್ಲ. ಅದರಲ್ಲಿಯೂ ಉತ್ತರಕನ್ನಡ ಮತ್ತು ಕರಾವಳಿ ಭಾಗದವರಿಗೆ ಈ ಮಳೆ ಅಮೃತಕ್ಕೆ ಸಮಾನ. ಇದು ಧರೆಗೆ ಬೀಳುವ ಮೊದಲೇ ಪಾತ್ರೆಗಳನ್ನಿಟ್ಟು ತುಂಬಿಸುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಈ ಮಳೆಗೆ ಇಷ್ಟೆಲ್ಲಾ ಹಿನ್ನಲೆ ಇದ್ಯಾ ಅಂತ ಕೆಲವರಿಗೆ ಆಶ್ಚರ್ಯವಾಗಬಹುದು. ಹೌದು… ಈ ಮಳೆ ಬಗ್ಗೆ ನಿಮಗೆ ತಿಳಿದರೆ ನೀವೂ ಕೂಡ ಪಾತ್ರೆಗಳಲ್ಲಿ ತುಂಬಿಸಿ ಶೇಖರಿಸಿ ಇಟ್ಟುಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ ಈ ಮಳೆ ಯಾಕಿಷ್ಟು ವಿಶೇಷ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸ್ವಾತಿ ಮಳೆ ಎಂದರೆ ಉತ್ತರಕನ್ನಡ, ಕರಾವಳಿಯ ಕೆಲವು ಭಾಗದವರಿಗೆ ಬಹಳ ವಿಶೇಷ. ಹಬ್ಬ ಹರಿದಿನಗಳು ಯಾವಾಗ ಬರುತ್ತದೆ ಎನ್ನುವುದನ್ನು ನೋಡುವುದರ ಜೊತೆ ಜೊತೆಗೆ ಈ ಮಳೆಯ ಆರಂಭ ದಿನವನ್ನು ಕೂಡ ಮರೆಯದೆ ನಿಗದಿಪಡಿಸಿಕೊಳ್ಳುತ್ತಾರೆ. ಯಾಕೆಂದರೆ ಪ್ರತಿವರ್ಷ ಈ ಅವಧಿಯಲ್ಲಿ ಅದರಲ್ಲಿಯೂ ಸ್ವಾತಿ ಮಳೆ ಸರಿಯಾಗಿ ಬಂದರೆ ಬೇಸಗೆಯಲ್ಲಿ ನೀರಿನ ಬರ ಬರುವುದಿಲ್ಲ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಮಾತ್ರವಲ್ಲ ಈ ಮಳೆಯ ಪ್ರತಿ ಹನಿಗಳಲ್ಲಿಯೂ ಅನೇಕ ರೀತಿಯ ಔಷಧೀಯ ಗುಣವಿರುತ್ತದೆ. ಅದಕ್ಕಾಗಿಯೇ ಸ್ವಾತಿ ಮಳೆಯನ್ನು ಹಿಡಿದಿಟ್ಟುಕೊಂಡು ಅದನ್ನು ಗಾಜಿನ ಭರಣಿ, ಬಾಟಲಿ, ಅಥವಾ ತಾಮ್ರ, ಹಿತ್ತಾಳೆಯ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟು, ಅದನ್ನು ವರ್ಷದ ಪೂರ್ತಿ ಬಳಸಲಾಗುತ್ತದೆ.
For More Updates Join our WhatsApp Group :
