ರಾಯಚೂರಿನಲ್ಲಿ ಭರದಿಂದ ಸಾಗಿದ ವಿಮಾನ ನಿಲ್ದಾಣ ಕಾಮಗಾರಿ.
ರಾಯಚೂರು: 1951ರಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ದೋಷ ಹಿನ್ನಲೆ ತುರ್ತು ಭೂಸ್ಪರ್ಶವಾಗಿದ್ದ ಜಾಗದಲ್ಲೇ ಇದೀಗ ವಿಮಾನ ನಿಲ್ದಾಣದ ಕಾರ್ಯ ಭರದಿಂದ ಸಾಗಿದೆ. ಜನಪ್ರತಿನಿಧಿಗಳು ಕೊಂಚ ಆಸಕ್ತಿ ತೋರಿಸಿದ್ದರೇ, ಯಾವಾಗಲೋ ವಿಮಾನ ನಿಲ್ದಾಣ ತಲೆ ಎತ್ತುತ್ತಿತ್ತು. ಆದರೆ ಇದೀಗ ತಡವಾದರೂ ಹತ್ತಾರು ತೊಡಕುಗಳನ್ನ ಪರಿಹರಿಸಿಕೊಂಡು ವಿಮಾನ ನಿಲ್ದಾಣ ಸಿದ್ಧವಾಗುತ್ತಿದೆ.
343 ಎಕರೆ ಪ್ರದೇಶ: 218 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ
ಗಡಿ ಜಿಲ್ಲೆ ರಾಯಚೂರಿನಲ್ಲಿ ವಿಮಾನ ನಿಲ್ದಾಣ ಆಗಬೇಕು ಎನ್ನುವುದು ಹಿಂದಿನಿಂದಲೂ ಈ ಭಾಗದ ಜನರ ಕನಸು. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಇಲ್ಲದೇ ಇದ್ದಿದ್ದರಿಂದ ಈವರೆಗೆ ರಾಯಚೂರಿನಲ್ಲಿ ಏರ್ಪೋರ್ಟ್ ಆಗಿರಲಿಲ್ಲ. ಸರ್ಕಾರಗಳು ಬಂದು ಹೋದರೂ ರಾಯಚೂರಿನಲ್ಲಿ ಏರ್ಪೋರ್ಟ್ ನಿರ್ಮಾಣ ಕಾರ್ಯ ಕನಸಾಗಿಯೇ ಉಳಿದಿತ್ತು. ಆದರೆ ಇದೀಗ ಇದೇ ಏರ್ಪೋರ್ಟ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ರಾಯಚೂರು ಹೊರಭಾಗದಲ್ಲಿರುವ ಯರಮರಸ್ ಬಳಿ ಸುಮಾರು 343 ಎಕರೆ ಪ್ರದೇಶದಲ್ಲಿ 218 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.
ವಿಮಾನ ನಿಲ್ದಾಣ ಕಾಮಗಾರಿ ಆರಂಭಕ್ಕೆ ಪೂರ್ಣ ಪ್ರಮಾಣದ ಅನುದಾನ, ಸ್ಥಳ, ಎರಡು ಹಳ್ಳಿಗಳ ಮನೆಗಳನ್ನ ಸ್ವಾಧೀನ ಪ್ರಕ್ರಿಯೆ, ತಾಂತ್ರಿಕ ಸಮಸ್ಯೆ ಸೇರಿ ಅನೇಕ ಅಡೆತಡೆಗಳು, ವಿವಾದಗಳು ಎದುರಾಗಿದ್ದವು. ಅದರಲ್ಲೂ ಪ್ರಮುಖವಾಗಿ ಏರ್ಪೋರ್ಟ್ ಮೀಸಲು ಸ್ಥಳದಲ್ಲಿದ್ದ ಏಗನೂರು ಗ್ರಾಮದ 42 ಮನೆಗಳು ಹಾಗೂ ದಂಡು ಗ್ರಾಮದ 108 ಮನೆಗಳ ಭೂಸ್ವಾಧೀನ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಆ ವಿವಾದ ಕೂಡ ಮುಗಿದಿದ್ದು, ಕೊನೆ ಹಂತದ ಪರಿಹಾರ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೈದರಾಬಾದ್ ಮೂಲದ ಖಾಸಗಿ ಕಂಪನಿಯೊಂದು 218 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಸಿದೆ.
ಈ ಕಾಮಗಾರಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಮುನ್ನಲೆಗೆ ಬಂದಿತ್ತು. ಈಗ ರಾಯಚೂರಿನ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಹಾಗೂ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಕೂಡ ತ್ವರಿತಗತಿಯ ಕಾಮಗಾರಿಗಾಗಿ ಶ್ರಮಿಸುತ್ತಿದ್ದಾರೆ.
For More Updates Join our WhatsApp Group :




