ಆರು ಗಂಭೀರವಾಗಿ ಗಾಯಗೊಂಡರು.
ಗದಗ: ಮುಂಡರಗಿ ತಾಲ್ಲೂಕಿನ ಡೋಣಿ ತಾಂಡಾದಲ್ಲಿ ತಡರಾತ್ರಿ ಭೀಕರ ಹಲ್ಲೆ ನಡೆದಿದ್ದು, ಸ್ಥಳೀಯರು ಬೆಚ್ಚಿಬೀಳಿದ್ದಾರೆ. ಗಾಢ ನಿದ್ರೆಯಲ್ಲಿ ಮಲಗಿದ್ದ ಆರು ಜನರ ಮೇಲೆ ಹರ್ಜಪ್ಪ ಲಮಾಣಿ ಎಂಬ ವ್ಯಕ್ತಿ ದೊಣ್ಣೆಯಿಂದ ದಾಳಿ ನಡೆಸಿದ್ದು, ಕೆಲರ ಸ್ಥಿತಿ ಗಂಭೀರವಾಗಿದೆ.
ತಾಂಡಾ ನಿವಾಸಿಗಳು ಕಂಗಾಲು
ಘಟನೆ ತಡರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ನಡೆದಿದ್ದು, ಹರ್ಜಪ್ಪ ಲಮಾಣಿ ಎಂಬ ವ್ಯಕ್ತಿ ದೊಣ್ಣೆಯಿಂದ ಮಲಗಿದ್ದವರ ಹಲ್ಲೆ ಮನಸೋಇಚ್ಛೆ ಮಾಡಿದ್ದಾನೆ. ಹಲ್ಲೆಗೊಳಗಾದ ಎಲ್ಲರೂ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಜನರ ಕೂಗಾಟ ಮತ್ತು ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ತಾಂಡಾ ನಿವಾಸಿಗಳು ಗಾಯಾಳುಗಳನ್ನು ಕಂಡು ಬೆಚ್ಚಿಬಿದ್ದಾರೆ.
ಕೆಲವರ ಸ್ಥಿತಿ ಚಿಂತಾಜನಕ
ಹಲ್ಲೆಯಲ್ಲಿ ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ್, ಷಣ್ಮುಖಪ್ಪ ರಾಠೋಡ, ಜಗದೀಶ್ ಲಮಾಣಿ ಹಾಗೂ ಚವಳ್ಳವ್ವ ಲಮಾಣಿ ಅವರಿಗೆ ತಲೆ, ಕಣ್ಣು ಮತ್ತು ಮುಖ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಮುಂಡರಗಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಘಟನೆಗೆ ನಿಖರ ಕಾರಣ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಗಾಯಾಳುಗಳ ಸ್ಥಿತಿ ಕಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಆರೋಪಿ ಮಾನಸಿಕ ಅಸ್ವಸ್ಥ
ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಮಾತನಾಡಿ, ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿ ಎಂದು ತಿಳಿದುಬಂದಿದೆ. ಆತ ಚಿಕಿತ್ಸೆ ಪಡೆಯುತ್ತಿದ್ದ ಮಾಹಿತಿ ದೊರೆತಿದ್ದು, ಈ ಹಿನ್ನೆಲೆ ದಾಳಿ ನಡೆದಿರಬಹುದೆಂದು ಶಂಕಿಸಲಾಗಿದೆ ಎಂದಿದ್ದಾರೆ.
For More Updates Join our WhatsApp Group :




