ಟೀಚರ್ ಹೊಡೆದಿದ್ದಕ್ಕೆ ಬೇಸರ, ಶಿಕ್ಷಕರ ಮೇಲೆ ಗುಂಡು ಹಾರಿಸಿದ ವಿದ್ಯಾರ್ಥಿ.

ಟೀಚರ್ ಹೊಡೆದಿದ್ದಕ್ಕೆ ಬೇಸರ, ಶಿಕ್ಷಕರ ಮೇಲೆ ಗುಂಡು ಹಾರಿಸಿದ ವಿದ್ಯಾರ್ಥಿ

ರುದ್ರಪುರ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಮನಸ್ಥಿತಿ ತೀರಾ ಸೂಕ್ಷ್ಮವಾಗುತ್ತಾ ಹೋಗುತ್ತಿದೆ. ಪೋಷಕರಾಗಲಿ, ಶಿಕ್ಷಕ ರಾಗಲಿ ಏನೂ ಹೇಳುವಂತಿಲ್ಲ, ಬುದ್ಧಿ ಹೇಳುವಂತಿಲ್ಲ, ಒಂದು ಪೆಟ್ಟು ಹೊಡೆಯುವಂತೆಯೂ ಇಲ್ಲ. ಅದನ್ನೇ ಮನಸ್ಸಿಗೆ ತೆಗೆದುಕೊಂಡು ಜೀವವನ್ನೇ ಕಳೆದುಕೊಳ್ಳುವ ತಪ್ಪು ನಿರ್ಧಾರ ಮಾಡುವ ಮನಸ್ಥಿತಿ ಒಂದು ಕಡೆ. ಶಿಕ್ಷಕರು ಬೈದಿದ್ದಕ್ಕೆ ಬೇಸರಗೊಂಡು ಅವರನ್ನೇ ಕೊಲ್ಲುವ ಮಟ್ಟಕ್ಕೆ ಇಳಿಯುವುದು ಇನ್ನೊಂದು ಕಡೆ.

ಟೀಚರ್ ಹೊಡೆದಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಶಾಲೆಗೆ ಪಿಸ್ತೂಲ್ ತೆಗೆದುಕೊಂಡು ಬಂದು ಶಿಕ್ಷಕರಿಗೆ ಗುರಿ ಇಟ್ಟು ಗುಂಡು ಹಾರಿಸಿರುವ ಘಟನೆ ರುದ್ರಪುರದಲ್ಲಿ ನಡೆದಿದೆ. ಭೌತಶಾಸ್ತ್ರದ ಶಿಕ್ಷಕರು ಹೊಡೆದಿದ್ದಕ್ಕೆ ಬೇಸರಗೊಂಡ 9ನೇ ತರಗತಿ ವಿದ್ಯಾರ್ಥಿ ಎರಡು ದಿನದ ಬಳಿಕ ದೇಶೀಯ ಪಿಸ್ತೂಲಿನೊಂದಿಗೆ ಶಾಲೆಗೆ ಹೋಗಿ ಶಿಕ್ಷಕರಿಗೆ ಗುಂಡು ಹಾರಿಸಿದ್ದಾನೆ.

ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು, ಗುರುವಾರ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಕಾಶಿಪುರ) ಅಭಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಭೌತಶಾಸ್ತ್ರ ಶಿಕ್ಷಕರು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದ್ದರೂ, ಅವರು ತಮ್ಮ ಮೇಲೆ ಕಪಾಳಮೋಕ್ಷ ಮಾಡಿದ್ದಾರೆ. ಅದಕ್ಕೆ ಸೇಡು ತೀರಿ ಸೇಡು ತೀರಿಸಿಕೊಳ್ಳಲು ಆತ ದೇಶೀಯ ಪಿಸ್ತೂಲ್ ತಂದು ಗುಂಡು ಹಾರಿಸಿದ್ದಾನೆ .

ಗುಂಡು ಶಿಕ್ಷಕನ ಭುಜಕ್ಕೆ ತಗುಲಿದ್ದು, ಶಾಲಾ ಅಧಿಕಾರಿಗಳು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಶಿಕ್ಷಕರ ದೂರಿನ ಮೇರೆಗೆ ಅಪ್ರಾಪ್ತ ವಯಸ್ಕನ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ ಎಂದು ಸಿಂಗ್ ಹೇಳಿದರು.

ವಿದ್ಯಾರ್ಥಿಯು ತನ್ನ ಶಾಲಾ ಬ್ಯಾಗಿನಲ್ಲಿ ಪಿಸ್ತೂಲನ್ನು ತರಗತಿ ಕೋಣೆಗೆ ತಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲೆಯಿಂದ ವಶಪಡಿಸಿಕೊಂಡ ಸಿಸಿಟಿವಿ ದೃಶ್ಯಾವಳಿಗಳು ತರಗತಿ ಮುಗಿದ ಕೂಡಲೇ ಶಿಕ್ಷಕನ ಮೇಲೆ ಗುಂಡು ಹಾರಿಸಿರುವುದನ್ನು ದೃಢಪಡಿಸಿವೆ. ಶಿಕ್ಷಕರು ವಿದ್ಯಾರ್ಥಿಯ ವಿರುದ್ಧ ಲಿಖಿತ ದೂರು ಸಲ್ಲಿಸಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 109 ರ ಅಡಿಯಲ್ಲಿ ಕೊಲೆ ಯತ್ನಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿಗೆ ಆ ಪಿಸ್ತೂಲ್ ಸಿಕ್ಕಿದ್ಹೇಗೆ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *