Tumakuru Court Judgment: ಮೊಬೈಲ್ ಕಸಿದು ಪರಾರಿಯಾದ ಕಳ್ಳನಿಗೆ 7 ವರ್ಷ ಜೈಲು ಶಿಕ್ಷೆ

Tumakuru Court Judgment

ತುಮಕೂರು ಮೊಬೈಲ್ ಕದ್ದ ಕಳ್ಳನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ತುಮಕೂರು ಜಿಲ್ಲಾ ಸತ್ರ ಪ್ರಧಾನ ನ್ಯಾಯಾಲಯ ತೀರ್ಪು ನೀಡಿದೆ. ಪ್ರದೀಪ್​ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ.

ಅಮಿತ್ ಹಾಗೂ ದಿಲೀಪ್ ಚೌಧರಿ ಎಂಬ ಇಬ್ಬರು ಯುವಕರಿಗೆ ಡ್ರ್ಯಾಗರ್ ತೋರಿಸಿ ಬೆದರಿಸಿ ಪ್ರದೀಪ್​​ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದನು. 2020ರಲ್ಲಿ ನಾಮದ ಚಿಲುಮೆ ಬಳಿ ಘಟನೆ ನಡೆದಿತ್ತು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.

ಪುನೀತ್ ವಿರುದ್ಧ ಐಪಿಸಿ 397 ಅಡಿ ದೂರು ದಾಖಲಾಗಿತ್ತು. ಅಂದಿನ ಇನ್​ಸ್ಪೆಕ್ಟರ್ ಚನ್ನೇಗೌಡ ಕೋರ್ಟ್​ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಆರ್​.ಟಿ. ಅರುಣಾ ವಾದ ಮಂಡಿಸಿದ್ದರು. ನ್ಯಾಯಧೀಶ ಬಿ. ಜಯಂತ್ ಕುಮಾರ್ ಅವರು ಈ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಅಭಿಯೋಜಕಿ ಆರ್​.ಟಿ. ಅರುಣಾ ಮಾತನಾಡಿ, “2020ರ ಡಿಸೆಂಬರ್​ 28 ರಂದು ರಂದು ಘಟನೆ ನಡೆದಿತ್ತು. ಅಮಿತ್​ ಹಾಗೂ ಆತನ ಸ್ನೇಹಿತ ದಿಲೀಪ್​ ಆ ದಿನ ನಾಮದ ಚಿಲುಮೆಗೆ ಹೋಗಿದ್ದರು. ವಾಪಸ್​ ಬರುವಂತಹ ಸಂದರ್ಭದಲ್ಲಿ ಒಂದು ಜಾಗದಲ್ಲಿ ಫೋಟೋ ತೆಗೆದುಕೊಳ್ಳುತ್ತಿರುತ್ತಾರೆ. ಆಗ ಕೆಟಿಎಂ ಬೈಕ್​ನಲ್ಲಿ ಇಬ್ಬರು ಹುಡುಗರು ಬರುತ್ತಾರೆ. ಒಬ್ಬ ಪ್ರದೀಪ್​, ಇನ್ನೊಬ್ಬ ಬಾಲಾಪರಾಧಿ. ಇಬ್ಬರು ಫೋಟೋ ತೆಗೆದುಕೊಳ್ಳುತ್ತಿದ್ದವರ ಬಳಿ ಹೋಗುತ್ತಾರೆ. ಫೋಟೋ ತೆಗೆಯುತ್ತಿರುವ ಮೊಬೈಲ್​ ಕೊಡುವಂತೆ ಕೇಳುತ್ತಾರೆ. ಆಗ ಅಮಿತ್​ ನನ್ನ ಮೊಬೈಲ್​ಗೆ ರಿಚಾರ್ಜ್​​ ಮಾಡಿಲ್ಲ, ನನ್ನ ಸ್ನೇಹಿತನ ಮೊಬೈಲ್​ ಕೊಡುತ್ತೇನೆ ಎಂದು ಹೇಳುತ್ತಾನೆ. ಆ ಮೊಬೈಲ್​ ಬೇಡ ಓಪೋ ಹೊಸ ವರ್ಷನ್​ ಮೊಬೈಲ್​ ಬೇಕು ಎಂದು ಪ್ರದೀಪ್​ ಹೇಳುತ್ತಾನೆ. ಇಬ್ಬರು ಮೊಬೈಲ್​ ಕೊಡಲ್ಲ ಎಂದು ಪ್ರತಿರೋಧಿಸಿದ್ದಾರೆ.

ಆಗ ಪ್ರದೀಪ್​ ಡ್ರ್ಯಾಗನ್​ ತೋರಿಸಿ, ಆತನಿಂದ ಮೊಬೈಲ್​ ಕಿತ್ತುಕೊಳ್ಳುತ್ತಾನೆ. ಅಮಿತ್​ ಮನೆಗೆ ಹೋಗಿ ಮೊಬೈಲ್​ ದರೋಡೆ ಮಾಡಿರುವ ಬಗ್ಗೆ ತನ್ನ ತಾಯಿಗೆ ತಿಳಿಸುತ್ತಾನೆ. ಅವನ ತಾಯಿ ದೂರು ದಾಖಲಿಸುತ್ತಾರೆ. ತನಿಖೆ ನಡೆದು, ಇನ್​ಸ್ಪೆಕ್ಟರ್ ಚನ್ನೇಗೌಡ ಅವರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸುತ್ತಾರೆ. ನ್ಯಾಯಾಲಯದಲ್ಲಿ 13 ಜನರನ್ನು ಸಾಕ್ಷಿ ವಿಚಾರಣೆ ಮಾಡಿದಾಗ, ಅಮಿತ್​ ಹಾಗೂ ದಿಲೀಪ್​ ಆರೋಪಿಯನ್ನು ಹಾಗೂ ಮೊಬೈಲ್​ ಅನ್ನು ನಿಖರವಾಗಿ ಗುರುತು ಹಿಡಿಯುತ್ತಾರೆ. ಉಳಿದ ಸಾಕ್ಷಿಗಳು ಕೂಡ ಆರೋಪಿಯನ್ನು ಗುರುತಿಸುತ್ತಾರೆ. ಈ ಎಲ್ಲವನ್ನೂ ಪರಿಗಣಿಸಿ ಜಿಲ್ಲಾ ಸತ್ರ ಪ್ರಧಾನ ನ್ಯಾಯಾಲಯದ ನ್ಯಾಯಧೀಶ ಬಿ. ಜಯಂತ್ ಕುಮಾರ್ ಅವರು ಆರೋಪಿ ಪ್ರದೀಪ್​ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ” ಎಂದು ಹೇಳಿದರು.

Leave a Reply

Your email address will not be published. Required fields are marked *