ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಕೊಲೆಗಳು ನಡೆದಿವೆ. ಅವುಗಳ ಮೃತದೇಹವನ್ನು ನಾನೇ ಹೂತಿದ್ದೇನೆ ಎಂದು ಆರೋಪಿಸಿದ್ದ ಸಾಕ್ಷ್ಯ ದೂರುದಾರನನ್ನು ಬಂಧಿಸಿದ ಬಳಿಕ ವೀರೇಂದ್ರ ಹೆಗ್ಗಡೆ ಅವರು ಬಹಿರಂಗ ಹೇಳಿಕೆಯನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿ ಪೋಸ್ಟ್ವೊಂದನ್ನು ಕೂಡ ಹಂಚಿಕೊಂಡಿದ್ದಾರೆ.
ಧರ್ಮಾಧಿಕಾರಿಗಳು ಹೇಳಿದ್ದೇನು? ಧರ್ಮಸ್ಥಳದಲ್ಲಿ ಸಾಮೂಹಿಕ ಶವಸಂಸ್ಕಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದ ಬಳಿಕ ದೇಶ-ವಿದೇಶಗಳಲ್ಲಿ ಭಾರಿ ಸುದ್ದಿಯಾಗಿದೆ. ಸಾಕ್ಷ್ಯ ದೂರುದಾರ ಮಾಸ್ಕ್ ಮ್ಯಾನ್ ಶವಗಳನ್ನು ತೋರಿಸುವುದಾಗಿ ಹೇಳಿದ ನಂತರ ಪ್ರಕರಣ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ.
ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ (SIT) ಇದೀಗ, ಆ ಮಾಸ್ಕ್ ಮ್ಯಾನ್ನನ್ನೇ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಇದರ ಬೆನ್ನಲ್ಲೇ ಧರ್ಮಸ್ಥಳ ದೇವಸ್ಥಾನದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಹೇಳಿಕೆಯನ್ನು ಸಾರ್ವಜನಿಕಗೊಳಿಸಿದ್ದಾರೆ.
“ಈಗ ಒಂದೊಂದೇ ಸತ್ಯಗಳು ಹೊರಗೆ ಬರುತ್ತಿವೆ. ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ. ಕ್ಷೇತ್ರದ ಮೇಲಿನ ನಂಬಿಕೆ, ಅಭಿಮಾನ ಹೀಗೇ ಇರಲಿ. ಧರ್ಮಸ್ಥಳಕ್ಕೆ ಬಂದು ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ತನಿಖೆ ಪ್ರಗತಿಯಲ್ಲಿರುವ ಕಾರಣ ಹೆಚ್ಚಿನದನ್ನು ಮಾತನಾಡುವುದಿಲ್ಲ” ಎಂದು ತುಳುವಿನಲ್ಲಿ ತಿಳಿಸಿದರು.