ತುಮಕೂರು : ನಗರದ ಬಾಲ ಮಂದಿರದ ಮಕ್ಕಳ ಪಾಲನೆ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಕೇಳಿಬಂದ ಹಿನ್ನೆಲೆ ಅಧೀಕ್ಷಕಿ ಸತ್ಯಪ್ರೇಮಗೆ ಕಾರಣ ಕೇಳಿ ನೊಟೀಸ್ ನೀಡಲಾಗಿದೆ. ರಾಜ್ಯ ಮಕ್ಕಳ ನಿರ್ದೇಶನಾಲಯದ ನಿರ್ದೇಶಕರಿಂದ ಅಧೀಕ್ಷಕಿಗೆ ನೊಟೀಸ್ ಜಾರಿ ಮಾಡಲಾಗಿದೆ.
ಕಳೆದ ಆಗಸ್ಟ್ 23ರಂದು ಅನಿರೀಕ್ಷಿತ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದಾಗ ಕರ್ತವ್ಯ ಲೋಪ ಬೆಳಕಿಗೆ ಬಂದಿದೆ. ಪೋಕ್ಸೋ ಪ್ರಕರಣದಡಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ 14 ಮಕ್ಕಳಿಗೆ ಆರ್ಥಿಕ ಸೌಲಭ್ಯ ಒದಗಿಸುವಲ್ಲಿ ಲೋಪ ಎಸಗಿದೆ ಎನ್ನಲಾಗಿದೆ.
63 ಮಕ್ಕಳ ಪೈಕಿ 23 ಮಕ್ಕಳನ್ನ ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆಗೆ ದಾಖಲು ಮಾಡಲಾಗಿದೆ. ವಸತಿ ಶಾಲೆಯಲ್ಲಿ ದಾಖಲಾದ ಮಕ್ಕಳನ್ನ ಹಾಜರಾತಿ ಪುಸ್ತಕದಲ್ಲಿ ಮುಂದುವರೆಸಿ ಸರ್ಕಾರದ ಅನುದಾನ ದುರ್ಬಳಕೆ ಮಾಡಲಾಗಿದೆ.
ಸಂಸ್ಥೆಯಲ್ಲಿ ಅವಶ್ಯವಾಗಿ ನಿರ್ವಹಿಸಬೇಕಾದ ದಾಖಲಾತಿಯನ್ನ ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು. ಮಕ್ಕಳಿಗೆ ಅವಶ್ಯಕ ಮೂಲಭೂತ ಸೌಲಭ್ಯಗಳನ್ನ ಒದಗಿಸದೇ ಇರುವ ಆಧಾರದ ಮೇಲೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ನೊಟೀಸ್ ಜಾರಿ ಮಾಡಿದೆ
ಬಾಲ ನ್ಯಾಯ (ಪಾಲನೆ ಮತ್ತು ರಕ್ಷಣೆ) ಕಾಯ್ದೆಯಲ್ಲಿ ಮಕ್ಕಳ ಪಾಲನೆಯಲ್ಲಿ ಲೋಪ ಎಸಗಿದ ಬಗ್ಗೆ ಕಾರಣ ಕೇಳಿ ನೊಟೀಸ್ ನೀಡಿದ್ದು 7 ದಿನಗಳಲ್ಲಿ ಉತ್ತರ ನೀಡುವಂತೆ ಹೇಳಿದೆ.