ಬಿಹಾರ : ಮಕ್ಕಳ ಆರೋಗ್ಯ, ವಿದ್ಯೆ, ಉತ್ತಮ ಭವಿಷ್ಯಕ್ಕಾಗಿ ತಾಯಂದಿರು ಕೈಗೊಳ್ಳುವ ಜೀವಿತ ಪುತ್ರಿಕಾ (Jitiya Festival) ವೃತದ ಅಂತ್ಯದಲ್ಲಿ ಭಾರಿ ದುರ್ಘಟನೆ ನಡೆದಿದೆ. ಉಪವಾಸ ಕುಳಿತು ಬಳಿಕ ಮಾಡುವ ಪುಣ್ಯ ಸ್ನಾನದ ವೇಳೆ ಒಟ್ಟು 40 ಮಂದಿ ಮೃತಪಟ್ಟ ಘಟನೆ ಬಿಹಾರ ರಾಜ್ಯದಲ್ಲಿ ನಡೆದಿದೆ.
ವಿವಿಧ ಜಿಲ್ಲೆಗಳಿಂದ ಒಟ್ಟಾರೆ 40 ಮಂದಿ ಸಾವು: ಬೇರೆ ಬೇರೆ ಜಿಲ್ಲೆಗಳಲ್ಲಿ ಈ ದುರಂತ ಸಂಭವಿಸಿದ್ದು, 40 ಮಂದಿ ಮೃತಪಟ್ಟರೆ ಮೂವರು ನಾಪತ್ತೆಯಾಗಿದ್ದಾರೆ. ಮೃತರ ಪೈಕಿ ಮಕ್ಕಳೇ ಹೆಚ್ಚಾಗಿದ್ದಾರೆ. ಔರಂಗಾಬಾದ್ನಲ್ಲಿ 10, ಇಥಾತ್ ಹಳ್ಳಿಯಿಂದ 5, ಮದನ್ಪುರ ಬ್ಲಾಕ್ನ ಕುಶಾಹ ಗ್ರಾಮದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. 14 ಜಿಲ್ಲೆಗಳಲ್ಲಿ ಈ ರೀತಿಯ ಅವಘಡ ಸಂಭವಿಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಪ್ರತಿ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೇ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪೂರ್ವ ಚಂಪಾರಣ್, ನಳಂದ, ಔರಂಗಬಾದ್, ಕೈಮೂರ್, ಬುಕ್ಸಾರ್, ಸಿವಾನ್, ರೋಹ್ಟಾಸ್, ಸರನ್, ಪಾಟ್ನಾ, ವೈಶಾಲಿ, ಮುಝಾಫರಪುರ್, ಸಮಸ್ತಿಪುರ್, ಗೋಪಾಲ್ಗಂಜ್, ಬೇಗುಸರಾಯ್ ಹಾಗೂ ಅರ್ವಾಲ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ.
ಕೈಮೂರ್ನ ವಿವಿಧಡೆ ನಾಲ್ವರು ಯುವಕರು ಸೇರಿದಂತೆ ಏಳು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ರುಪ್ಪುರ್ ಗ್ರಾಮದವಾರದ ಕಿಶನ್ ಕುಮಾರ್ (16), ಸತ್ಯಂ ಕುಮಾರ್ (16), ಅಭೈಡೆ ಗ್ರಾಮದ ಸುಮಿತ್ ಕುಮಾರ್ (15), ದಾದರ್ ಗ್ರಾಮದ ಆನಂದ್ ಗುಪ್ತಾ (15), ತರ್ಹಾನಿ ಗ್ರಾಮದ ರೋಹನ್ ಬಿಂದ್ (10), ಕಲ್ಯಾಣಪುರ ಗ್ರಾಮದ ಅನ್ಮೋಲ್ ಗುಪ್ತಾ (8) ಮೃತ ದೈರ್ದೈವಿಗಳೆಂದು ಗುರುತಿಸಲಾಗಿದೆ. ಸರನ್ ಜಿಲ್ಲೆಯ ಛಪ್ರಾದಲ್ಲಿ ಬುಧವಾರ ಐವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.