ಪುಣೆ: ಅಕ್ಕಾ ಎಂದು ಕರೆದು ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪಿ ದತ್ತಾತ್ರೇಯ ರಾಮದಾಸ್ ಹುಡುಕಲು ಪೊಲೀಸರು 13 ತಂಡಗಳನ್ನು ರಚಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆತನ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂ. ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಆತ ವೇಷ ಬದಲಾಯಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆತ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದು, ಯಾವುದೋ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.
ಮಹಿಳೆ ಪುಣೆಯ ಜನನಿಬಿಡ ಸ್ವರ್ಗೇಟ್ ಬಳಿ ಬಸ್ಗಾಗಿ ಕಾಯುತ್ತಿದ್ದಳು, ಪೊಲೀಸ್ ಠಾಣೆಯಿಂದ ಸುಮಾರು 100 ಮೀಟರ್ ದೂರದಲ್ಲಿ ನಿಲ್ಲಿಸಿದ್ದ ಬಸ್ಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಮಂಗಳವಾರ ಬೆಳಗ್ಗೆ 5.30 ಕ್ಕೆ ಆಕೆ ತನ್ನ ಮನೆಗೆ ಹೋಗಲು ಬಸ್ಗಾಗಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ.
ಬಸ್ ಇಲ್ಲಿ ಬರುವುದಿಲ್ಲ ಬೇರೆ ಕಡೆ ನಿಲ್ಲಿಸಲಾಗಿದೆ ಎಂದು ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ನಾವು ಆರೋಪಿಯನ್ನು ಗುರುತಿಸಿದ್ದೇವೆ ಮತ್ತು ಅವನನ್ನು ಬಂಧಿಸಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಮಹಿಳೆಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಈ ಘಟನೆಯು ಪುಣೆಯಾದ್ಯಂತ ಪ್ರತಿಭಟನೆಗಳನ್ನು ಹುಟ್ಟುಹಾಕಿದೆ. ನ್ಯಾಯಕ್ಕಾಗಿ ಆಗ್ರಹಿಸಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಪ್ರತಿಭಟನೆಗಳನ್ನು ಯೋಜಿಸಿವೆ.
ಅತ್ಯಾಚಾರಕ್ಕೂ ಮುನ್ನ ನಡೆದಿದ್ದೇನು?
ಬೆಳಗ್ಗೆ 5.45 ರ ಸುಮಾರಿಗೆ ಪಕ್ಕದ ಸತಾರ ಜಿಲ್ಲೆಯ ಫಾಲ್ಟನ್ಗೆ ಹೋಗುವ ಬಸ್ಗಾಗಿ ಒಂದು ಪ್ಲಾಟ್ಫಾರ್ಮ್ನಲ್ಲಿ ಕಾಯುತ್ತಿದ್ದಾಗ, ಒಬ್ಬ ವ್ಯಕ್ತಿ ಹತ್ತಿರ ಬಂದು ಅವಳನ್ನು ಅಕ್ಕಾ ಎಂದು ಕರೆದು ಮಾತನಾಡಲು ಶುರು ಮಾಡಿದ್ದ, ಸತಾರಕ್ಕೆ ಹೋಗುವ ಬಸ್ ಮತ್ತೊಂದು ಪ್ಲಾಟ್ಫಾರ್ಮ್ಗೆ ಬಂದಿದೆ ಎಂದು ಹೇಳಿದ್ದ, ವಿಶಾಲವಾದ ನಿಲ್ದಾಣದ ಆವರಣದಲ್ಲಿ ಬೇರೆಡೆ ನಿಲ್ಲಿಸಿದ್ದ ಖಾಲಿ ಶಿವ ಶಾಹಿ ಎಸಿ ಬಸ್ಗೆ ಅವಳನ್ನು ಕರೆದೊಯ್ದಿದ್ದಾನೆ.
ಬಸ್ಸಿನೊಳಗೆ ಲೈಟ್ ಇಲ್ಲದ ಕಾರಣ ಆಕೆ ಹಿಂಜರಿಕೆಯಿಂದಲೇ ಬಸ್ ಹತ್ತಿದ್ದಳು. ಆಕೆ ವಿಚಾರ ತಿಳಿದು ಓಡಿ ಹೋಗಲು ಪ್ರಯತ್ನಿಸುವ ಮುನ್ನವೇ ಅತ್ಯಾಚಾರವೆಸಗಿದ್ದಾನೆ. ಆರೋಪಿಯು ಮಹಿಳೆಗೆ ತಾನು ಫಾಲ್ಟನ್ ಬಸ್ನ ಕಂಡಕ್ಟರ್ ಎಂದು ಹೇಳಿದ್ದಾನೆ, ಆದ್ದರಿಂದ ಆಕೆ ಅವನನ್ನು ನಂಬಿ ಅವನೊಂದಿಗೆ ಹೋಗಿದ್ದಳು.
MSRTC ದೇಶದ ಅತಿದೊಡ್ಡ ಸಾರ್ವಜನಿಕ ಸಾರಿಗೆ ಸಂಸ್ಥೆಗಳಲ್ಲಿ ಒಂದಾಗಿದೆ, 14,000 ಕ್ಕೂ ಹೆಚ್ಚು ಬಸ್ಸುಗಳನ್ನು ಹೊಂದಿದೆ. ಪ್ರತಿದಿನ, 55 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಇದರ ಬಸ್ಗಳಲ್ಲಿ ಪ್ರಯಾಣಿಸುತ್ತಾರೆ. ಪುಣೆ ನಗರದ MSRTC ಯ ಮೂರು ಬಸ್ ನಿಲ್ದಾಣಗಳಲ್ಲಿ ಸ್ವರ್ಗೇಟ್ ಒಂದಾಗಿದೆ ಮತ್ತು ಮಹಾರಾಷ್ಟ್ರದ ಎಲ್ಲಾ ಭಾಗಗಳ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕರ್ನಾಟಕದಂತಹ ಪಕ್ಕದ ರಾಜ್ಯಗಳಿಂದಲೂ ಇದು ಬಸ್ಸುಗಳನ್ನು ಪಡೆಯುತ್ತದೆ. ಆತನಿಗೆ ಮರಣದಂಡನೆ ವಿಧಿಸಬೇಕು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಒತ್ತಾಯಿಸಿದ್ದಾರೆ.