‘KGF’ ಸಿನಿಮಾ ಸರಣಿ ಮೂಲಕ ಹೊಸ ಅಲೆಯನ್ನೇ ಎಬ್ಬಿಸಿದ ನಿರ್ದೇಶಕ ಪ್ರಶಾಂತ್ ನೀಲ್, ‘ಕೆಜಿಎಫ್’ ಸಿನಿಮಾಗಳ ಬಳಿಕ ತೆಲುಗು ಚಿತ್ರರಂಗಕ್ಕೆ ಹೋದವರು ಅಲ್ಲೇ ಸೆಟಲ್ ಆಗಿಬಿಟ್ಟಿದ್ದಾರೆ. ಪ್ರಭಾಸ್ಗಾಗಿ ‘ಸಲಾರ್’ ಸಿನಿಮಾ ಮಾಡಿದ ಪ್ರಶಾಂತ್ ನೀಲ್ ಈಗ ಜೂ ಎನ್ಟಿಆರ್ ಅವರಿಗಾಗಿ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ ಮತ್ತೆ ಪ್ರಭಾಸ್ ಜೊತೆಗೆ ‘ಸಲಾರ್ 2’ ಸಿನಿಮಾ ಮಾಡಲಿದ್ದಾರೆ. ‘ಸಲಾರ್ 2’ ಮುಗಿದ ಬಳಿಕವಾದರೂ ಕನ್ನಡಕ್ಕೆ ಮರಳಿ ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಈಗ ಅದೂ ಸಹ ಸುಳ್ಳಾಗಿದೆ.

‘ಕೆಜಿಎಫ್’ ಸಿನಿಮಾ ಸರಣಿಯ ಸೃಷ್ಟಿಕರ್ತ ಪ್ರಶಾಂತ್ ನೀಲ್ ತೆಲುಗು ಸಿನಿಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದೇ ಬರುವೆ ಎಂದು ನೀಲ್ ಹೇಳಿದ್ದಾರಾದರೂ ನಿಕಟ ಭವಿಷ್ಯದಲ್ಲಿ ಅದು ಸಾಧ್ಯವಾಗುವಂತಿಲ್ಲ. ಈಗ ಜೂ ಎನ್ಟಿಆರ್ ಜೊತೆ ಸಿನಿಮಾ ಆಡುತ್ತಿರುವ ನೀಲ್, ಅದರ ಬಳಿಕ ‘ಸಲಾರ್ 2’ ಮಾಡಲಿದ್ದಾರೆ. ಅದಾದ ಬಳಿಕ ತೆಲುಗಿನ ಸ್ಟಾರ್ ನಟರೊಬ್ಬರ ಜೊತೆಗೆ ಹೊಸ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.
ಪ್ರಭಾಸ್ ಜೊತೆಗೆ ‘ಸಲಾರ್ 2’ ಸಿನಿಮಾದ ಬಳಿಕ ಪ್ರಶಾಂತ್ ನೀಲ್ ತೆಲುಗಿನ ಮತ್ತೊಬ್ಬ ಸ್ಟಾರ್ ನಟನ ಜೊತೆಗೆ ಕೆಲಸ ಮಾಡಲಿದ್ದಾರೆ. ಪ್ರಶಾಂತ್ ನೀಲ್ ಅವರು ತೆಲುಗಿನ ಸ್ಟಾರ್ ನಟ ರಾಮ್ ಚರಣ್ ಅವರಿಗಾಗಿ ಹೊಸದೊಂದು ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಈ ಬಗ್ಗೆ ಈಗಾಗಲೇ ಮಾತುಕತೆ ನಡೆದಿದ್ದು, ರಾಮ್ ಚರಣ್ ಅವರಿಗೆ ನೀಲ್ ಹೇಳಿರುವ ಐಡಿಯಾ ಇಷ್ಟವಾಗಿದೆಯಂತೆ. ಸಿನಿಮಾದ ಚಿತ್ರಕತೆ ಮೇಲೆ ನೀಲ್ ಹೆಚ್ಚಿನ ಕೆಲಸ ಮಾಡುತ್ತಿದ್ದಾರೆ.
ಕೆಲವೇ ದಿನಗಳ ಹಿಂದೆ ಹರಿದಾಡಿದ್ದ ಸುದ್ದಿಯ ಪ್ರಕಾರ, ಪ್ರಶಾಂತ್ ನೀಲ್, ಅಲ್ಲು ಅರ್ಜುನ್ ಜೊತೆಗೆ ಸಿನಿಮಾ ಮಾಡಲಿದ್ದು, ಸಿನಿಮಾಕ್ಕೆ ‘ರಾವಣಂ’ ಎಂದು ಹೆಸರಿಡಲಾಗಿದೆ. ಸಿನಿಮಾ ಅನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯಂತೆ. ಅದೇ ಕತೆಯನ್ನು ಅಲ್ಲು ಅರ್ಜುನ್ ಬದಲಾಗಿ ರಾಮ್ ಚರಣ್ ಅವರಿಗೆ ಮಾಡಲಿದ್ದಾರಂತೆ. ಸಿನಿಮಾಕ್ಕೆ ದಿಲ್ ರಾಜು ಅವರೇ ಬಂಡವಾಳ ಹೂಡಲಿದ್ದಾರೆ ಎನ್ನಲಾಗುತ್ತಿದೆ.