ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಹೊಸ ಬೆಳವಣಿಗೆ
ಮಂಗಳೂರು: ದಕ್ಷಿಣ ಕನ್ನಡದ ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ರಕ್ಷಣೆ ಕೋರಿ ಬಂದ ಮಹಿಳೆಯರಿಗೆ ಲೈಂಗಿಕ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ಆಡಿಯೋ, ವಿಡಿಯೋಗಳು ವೈರಲ್ ಆಗಿವೆ. ಆದರೆ, ಇನ್ಸ್ಪೆಕ್ಟರ್ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಇನ್ನು ಇದೀಗ ಇನ್ಸ್ಪೆಕ್ಟರ್ ಸಂದೇಶ್ ಮೇಲೆ ಲೈಂಗಿಕ ಆರೋಪ ಮಾಡಿರುವ ಸಂತ್ರಸ್ತ ಮಹಿಳೆ ವಿರುದ್ಧವೇ ಆಕೆಯ ಸಹೋದರಿ ಗಂಭೀರ ಆರೋಪ ಮಾಡಿ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ಅಲ್ಲದೇ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಇನ್ಸ್ ಪೆಕ್ಟರ್ ಸಂದೇಶ್ ವಿರುದ್ದ ಗೃಹ ಸಚಿವರಿಗೆ ಮಹತ್ವದ ಪತ್ರ ಬರೆದಿದ್ದಾರೆ.
ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಸಂತ್ರಸ್ತೆ ಸಹೋದರಿ
ಮೂಡುಬಿದಿರಿ ಇನ್ಸ್ಪೆಕ್ಟರ್ ಸಂದೇಶ್ ಮೇಲಿನ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸಂತ್ರಸ್ತೆ ಸಹೋದರಿ, ಇಡೀ ಪ್ರಕರಣದಲ್ಲಿ ಸಂದೇಶ್ ನಿರಪರಾಧಿ ಎಂದಿದ್ದಾರೆ. ಕುಟುಂಬ ಕಲಹದ ಮೇಲಿನ ದ್ವೇಷದಿಂದ ಇನ್ಸ್ಪೆಕ್ಟರ್ ಮೇಲೆ ಸಂತ್ರಸ್ತೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಸಂದೇಶ್ ಉತ್ತಮ ವ್ಯಕ್ತಿ, ನನ್ನ ಸಹೋದರಿ ಇಲ್ಲ ಸಲ್ಲದ ದ್ವೇಷದಿಂದ ಹಗೆತನ ಸಾಧಿಸುತ್ತಿದ್ದಾರೆ. ಸಂದೇಶ್ ನ್ಯಾಯದ ಪರವಾಗಿದ್ದಾರೆ. ನಾನು ಸ್ವಯಂ ಆಗಿ ಹೇಳುತ್ತಿದ್ದೇನೆ, ನನಗೆ ಯಾರೂ ಈ ರೀತಿ ಹೇಳುವಂತೆ ಸೂಚಿಸಿಲ್ಲ ಎಂದು ಸಂತ್ರಸ್ತೆ ಸಹೋದರಿ ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪ ಎದುರಿಸುತ್ತಿರುವ ಇನ್ಸ್ಪೆಕ್ಟರ್ ಸಂದೇಶ್ ಪ್ರಕರಣ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದು, ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಲಿದೆ ಎನ್ನುವುದು ಕಾದುನೋಡಬೇಕಿದೆ.
For More Updates Join our WhatsApp Group :




