ಬೆಂಗಳೂರು: ನಟಿ ಅನುಶ್ರೀ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಆಗಸ್ಟ್ 28ರಂದು ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದ ರೆಸಾರ್ಟ್ ಒಂದರಲ್ಲಿ ಈ ವಿವಾಹ ನೆರವೇರುತ್ತಿದೆ. ಆಪ್ತರು, ಕುಟುಂಬದವರು ಹಾಗೂ ಗೆಳೆಯರ ಸಮ್ಮುಖದಲ್ಲಿ ಈ ಮದುವೆ ನಡೆಯಲಿದೆ. ಅನುಶ್ರೀ ಅವರು ರೋಷನ್ ಅವರನ್ನು ವಿವಾಹ ಆಗುತ್ತಿದ್ದಾರೆ. ರೋಷನ್ ಕೊಡಗು ಮೂಲದವರು. ಅನುಶ್ರೀ ವಿವಾಹ ಆಗುತ್ತಿರುವ ದಿನಕ್ಕೆ ಒಂದು ವಿಶೇಷ ಇದೆ. ಅದಕ್ಕೆ ಕಾರಣ ಇಲ್ಲಿದೆ.
ಅನುಶ್ರೀ ಹಾಗೂ ರೋಷನ್ ಅವರದ್ದು ಪ್ರೇಮ ವಿವಾಹ ಎನ್ನಲಾಗಿದೆ. ಅವರು ಈ ಮೊದಲು ಪುನೀತ್ ಅವರ ಮನೆಯಲ್ಲಿ ಭೇಟಿ ಆದರು. ಆ ಬಳಿಕ ಇಬ್ಬರ ಮಧ್ಯೆ ಪರಿಚಯ ಬೆಳೆದು, ಪ್ರೀತಿ ಮೂಡಿತು. ಈಗ ಪರಸ್ಪರ ಮನೆಯವರ ಒಪ್ಪಿಗೆ ಪಡೆದು ಅವರು ವಿವಾಹ ಆಗುತ್ತಿದ್ದಾರೆ. ಸಂಭ್ರಮ ಬೈ ಸ್ಪಾನ್ಲೈನ್ಸ್ ಸ್ಟುಡಿಯೋಸ್ನಲ್ಲಿ ಈ ಮದುವೆ ನೆರವೇರುತ್ತಿದೆ.
ಅನುಶ್ರೀ ಅವರು ವಿವಾಹ ಆಗುತ್ತಿರುವ ದಿನ ವಿಶೇಷ ಆಗಿದೆ. ಏಕೆಂದರೆ ಅದು ಇಲಿ ಪಂಚಮಿ ದಿನ. ಗಣಪತಿ ಹಬ್ಬದ ಸಮಯದಲ್ಲೇ ಅನುಶ್ರೀ ಅವರು ಹಸೆಮಣೆ ಏರುತ್ತಿದ್ದಾರೆ ಅನ್ನೋದು ವಿಶೇಷ. ಸಾಮಾನ್ಯವಾಗಿ ವಿವಾಹಗಳನ್ನು ಹಬ್ಬದ ಸಂದರ್ಭದಲ್ಲಿ ಮಾಡುವುದಿಲ್ಲ. ಆದರೆ ಅನುಶ್ರೀ ಮಾತ್ರ ಇದಕ್ಕೆ ಭಿನ್ನ.
ಅನುಶ್ರೀ ಅವರು ಆ್ಯಂಕರ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇತ್ತೀಚೆಗೆ ಅನುಶ್ರೀ ಅವರ ಲಗ್ನ ಪತ್ರಿಕೆ ವೈರಲ್ ಆಗಿದೆ. ‘ನೀವೆಲ್ಲ ಕೇಳುತ್ತಿದ್ದ ಪ್ರಶ್ನೆಗೆ ಈಗ ಉತ್ತರ, ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿಯಾಗುವ ಹೊಸ ಮನ್ವಂತರ’ ಎಂದು ಲಗ್ನ ಪತ್ರಿಕೆಯಲ್ಲಿ ಅನುಶ್ರೀ ಬರೆದಿದ್ದಾರೆ. ಅನುಶ್ರೀ ಅವರು ತಮ್ಮ ಲಗ್ನ ಪತ್ರಿಕೆಗಳನ್ನು ಎಲ್ಲಾ ಸೆಲೆಬ್ರಿಟಿಗಳಿಗೂ ನೀಡಿದ್ದಾರೆ. ಈ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕುವ ನಿರೀಕ್ಷೆ ಇದೆ. ಅನುಶ್ರೀ ಅವರು ವಿವಾಹದ ಬಳಿಕವೂ ನಿರೂಪಣೆಯನ್ನು ಮುಂದುವರಿಸಲಿದ್ದಾರೆ ಎನ್ನಲಾಗಿದೆ.
For More Updates Join our WhatsApp Group :