ತಿರುವನಂತಪುರಂ: ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ (Sabarimala) ಸಂಭವಿಸುವ ಮಕರ ಜ್ಯೋತಿಯನ್ನು (ಮಕರವಿಳಕ್ಕು) ಕಣ್ತುಂಬಿಕೊಳ್ಳಲು ಅಯ್ಯಪ್ಪ ಭಕ್ತರು ಕಾತರರಾಗಿದ್ದಾರೆ. ಹೀಗಾಗಿ, ಶಬರಿಮಲೆಗೆ ಭಕ್ತರ ದಂಡೇ ಆಗಮಿಸುತ್ತಿದೆ. ಜನಸಂದಣಿಯನ್ನು ನಿಯಂತ್ರಿಸಲು ಶಬರಿಮಲೆ ದರ್ಶನಕ್ಕೆ ಬರುವ ಭಕ್ತರಿಗೆ ಸ್ಪಾಟ್ ಬುಕಿಂಗ್ ಅನ್ನು 5,000ಕ್ಕೆ ಮಿತಿಗೊಳಿಸಲಾಗಿದೆ.
ಮಕರ ಜ್ಯೋತಿಯನ್ನು (Makarajyothi) ಕಣ್ತುಂಬಿಕೊಳ್ಳಲು ಶಬರಿಮಲೆಗೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಆಗ, ಶಬರಿಮಲೆಯಲ್ಲಿ ಭಕ್ತಾದಿಗಳ ನೂಕುನುಗ್ಗಲು ತಪ್ಪಿಸುವ ನಿಟ್ಟಿನಲ್ಲಿ ಸನ್ನಿಧಾನಂನಲ್ಲಿ ಸ್ಪಾಟ್ ಬುಕ್ಕಿಂಗ್ ಸೌಲಭ್ಯವನ್ನು ನಾಳೆಯಿಂದ (ಜ.8) ಜನವರಿ 15ರ ವರೆಗೆ ದಿನಕ್ಕೆ 5000 ಜನರಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ.
ಶಬರಿಮಲೆಯಲ್ಲಿ ಹಬ್ಬ ಹರಿದಿನಗಳಲ್ಲಿ ಜನಸಂದಣಿ ನಿರ್ವಹಣೆಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ. ದೇವಸ್ವಂ ಬೋರ್ಡ್ ವೆಬ್ಸೈಟ್ನಲ್ಲಿ ಜ.12 ರಂದು 60,000, ಜ.13 ರಂದು 50,000 ಮತ್ತು ಜ.14 ರಂದು 40,000 ಎಂದು ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ಅನ್ನು ನಿಗದಿಪಡಿಸಲಾಗಿದೆ. ಮಕರ ಜ್ಯೋತಿ ದಿನ (ಜ.14) ಬೆಟ್ಟದ ಮೇಲೆ ಬಿಡಾರ ಹೂಡದಂತೆ ಭಕ್ತರಿಗೆ ಸಲಹೆ ನೀಡಲಾಗಿದೆ.
ಜ.10 ರಿಂದಲೇ ಪರ್ಣಶಾಲೆಗಳಲ್ಲಿ ಭಕ್ತರು ಕಾದು ಜ್ಯೋತಿ ದರ್ಶನ ಮಾಡುವುದು ವಾಡಿಕೆ. ಈ ಕಾರಣಕ್ಕಾಗಿ ಮಕರವಿಳಕ್ಕು ದಿನದಂದು ಉಂಟಾಗಬಹುದಾದ ಜನಸಂದಣಿ ತಪ್ಪಿಸಲು ಸಿದ್ಧತೆಗಳು ನಡೆಯುತ್ತಿವೆ. ಸ್ಪಾಟ್ ಬುಕ್ಕಿಂಗ್ ಅನ್ನು ಸೀಮಿತಗೊಳಿಸುವುದರ ಜೊತೆಗೆ ನಿಲಕ್ಕಲ್ನಲ್ಲಿ ಭಕ್ತರನ್ನು ಪಂಪಾ ನದಿಗೆ ಪ್ರವೇಶಿಸಲು ಅನುಮತಿಸುವ ಮೊದಲು ಪೊಲೀಸರು ತಪಾಸಣೆ ನಡೆಸುತ್ತಾರೆ. ಪರ್ಣಶಾಲೆಯಲ್ಲಿ ಕುಳಿತುಕೊಳ್ಳುವ ಭಕ್ತರ ಅಡುಗೆ ಮತ್ತು ಇತರ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರು ಮಾರ್ಗಸೂಚಿಗಳನ್ನು ಜಾರಿಗೆ ತರಲಿದ್ದಾರೆ. ಜ್ಯೋತಿ ದರ್ಶನಕ್ಕೆ ಸಜ್ಜಾಗಿರುವ ವಿವಿಧೆಡೆ ಭದ್ರತೆಗಾಗಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.