ವಿಚ್ಛೇದನಕ್ಕೆ ಬಂದ್ರು, ವಿವಾಹಕ್ಕೆ ಒಪ್ಪಿದ್ರು : ತುಮಕೂರಲ್ಲಿ ಕಂಡು ಬಂತು ವಿಶೇಷ ಪ್ರಕರಣ

ತುಮಕೂರು: ಆ 18 ಜೋಡಿಗಳು ಸಾಂಸಾರಿಕ ಜೀವನದಲ್ಲಿ ಉಂಟಾಗಿದ್ದ ಬಿರುಗಾಳಿಯಿಂದ ವಿಚ್ಚೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ರು. ಆದರೆ ಕೊನೆಗೆ ಮದುವೆ ವಿವಾಹಕ್ಕೆ ಒಪ್ಪಿ ಒಂದಾಗಿ ಮತ್ತೆ ಗಂಡನ ಮನೆಗೆ ತೆರಳಿದರು.

ಇಂತಹ ವಿಶೇಷ ಪ್ರಸಂಗ ತುಮಕೂರು ನ್ಯಾಯಾಲಯಗಳಲ್ಲಿ ನಡೆದ ಲೋಕಾದಾಲತ್ ನಲ್ಲಿ ನಡೆಯಿತು.

ಹೌದು, ಬೇರೆ ಬೇರೆ ಕಾರಣಗಳಿಗೆ ಅವರ ಸಾಂಸಾರಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಇನ್ನು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಅವರೆಲ್ಲರೂ ವಿಚ್ಛೇದನಕ್ಕೆ ಮುಂದಾಗಿದ್ದರು. ನ್ಯಾಯಾಲಯಕ್ಕೆ ವಿಚ್ವೇದನಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ವಿಚ್ಚೇದನಕ್ಕೆ ಬಂದ ಆ 18 ಜೋಡಿ ಮತ್ತೆ ವಿವಾಹ ಒಪ್ಪಂದಕ್ಕೆ ಒಪ್ಪಿ ಒಂದಾದರು‌‌.

ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ 13, ಮಧುಗಿರಿ ನ್ಯಾಯಾಲಯದಲ್ಲಿ 2, ಪಾವಗಡದಲ್ಲಿ 1, ತಿಪಟೂರಿನಲ್ಲಿ 1, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ 1ಸೇರಿ‌ ಒಟ್ಟು 18 ಜೋಡಿಗಳು ಪುನಃ ಒಂದಾಗಿ ಗಂಡನ ಮನೆಗೆ ತೆರಳಿದ್ದಾರೆ.

ಜಿಲ್ಲೆಯ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿತ್ತು. ಈ ಅದಾಲತ್ ನಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳ ವಾದ-ವಿವಾದಗಳನ್ನು ಆಲಿಸಿ ಎರಡೂ ಕಡೆಯ ವಕೀಲರನ್ನು ಸಂಪರ್ಕಿಸಿ ಅವರ ಸಮ್ಮುಖದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ರವರು ಗಂಡ ಹೆಂಡತಿಯನ್ನು ಒಂದು ಮಾಡಿದರು.

ದಂಪತಿಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಚಿಕ್ಕ ವಿಚಾರಗಳಿಗೆ ಮನಸ್ಥಾಪ ಮಾಡಿಕೊಳ್ಳಬಾರದು, ಮಕ್ಕಳ ಹಿತಕ್ಕಾಗಿ ಹಿರಿಯರನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಅವರ ಮನಸ್ಸಿಗೆ ಘಾಸಿ ಮಾಡಬಾರದು ಎಂದು ಬುದ್ಧಿ ಹೇಳಿ ಪರಸ್ಪರರಿಗೆ ಹಾರ ಬದಲಾಯಿಸಿ ಸಿಹಿ ತಿನ್ನಿಸಿ ಒಂದು ಮಾಡಿ ಮನೆಗೆ ಕಳಿಸಿದರು.
ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಮುನಿರಾಜುರವರು ಗಂಡ ಹೆಂಡತಿ ಎರಡು ಕೈಗಳಿದ್ದಂತೆ ಒಂದು ಕೈ ಏನೂ ಕೆಲಸ ಮಾಡಲಾಗದು ಎರಡೂ ಕೈ ಇದ್ದರೆ ಚಪ್ಪಾಳೆ, ಇಬ್ಬರೂ ಒಬ್ಬರನ್ನೊಬ್ಬರು ನಂಬಬೇಕು, ಪರಸ್ಪರ ಪ್ರೀತಿ ವಿಶ್ವಾಸ ನಂಬಿಕೆಯಿಂದ ಜೀವನ ನಡೆಸಿದಾಗ ಸಮಾಜದಲ್ಲಿ ಶಾಂತಿ ಸಾಧ್ಯ, ನೀವು ಸಹ ಅಭಿವೃದ್ಧಿ ಹೊಂದುತ್ತೀರಿ ಎಂದು ತಿಳಿ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ಅವರು, ಮಕ್ಕಳ ಭವಿಷ್ಯದ ದೃಷ್ಟಿಯಿಂದ, ತಂದೆ-ತಾಯಿ, ಅತ್ತೆ-ಮಾವನವರ ಹಿತದೃಷ್ಟಿಯಿಂದ ಇಬ್ಬರೂ ಒಂದಾಗಬೇಕು, ಗಂಡ ಹೆಂಡತಿ ಜೊತೆಯಲ್ಲಿದ್ದರೆ ಅದಕ್ಕೆ ಬೆಲೆ, ಕುಟುಂಬ ಮುಖ್ಯ ಪುನಃ ಜಗಳವಾಡಿ ನ್ಯಾಯಾಲಯಕ್ಕೆ ಅರ್ಜಿ ಹಾಕಿಕೊಂಡು ಬರಬೇಡಿ, ನೂರಾರು ಕಾಲ ಸಂತಸದಿಂದ ಜೀವನ ಸಾಗಿಸಿ ಎಂದು ಶುಭ ಹಾರೈಸಿದ್ದಾರೆ.

ಸತಿ ಪತಿಗಳಿಬ್ಬರಲ್ಲೂ ಸಣ್ಣ ಪುಟ್ಟ ಅಪನಂಬಿಕೆ, ಹೊಂದಾಣಿಕೆ ಕೊರತೆ ಸೇರಿದಂತೆ ನಾನಾ ಕಾರಣಕ್ಕೆ ಸಂಸಾರ ಎಂಬ ಪ್ರಯಾಣದಲ್ಲಿ ಬಿರುಗಾಳಿ ಎದ್ದಿತ್ತು. ಇನ್ನು ಒಟ್ಟಿಗೇ ಜೀವನ ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಡೈವೋರ್ಸ್‌ಗೆ ಮುಂದಾಗಿದ್ದರು. ಅಂತಹ ಜೋಡಿಗಳನ್ನು ಮತ್ತೆ ಒಂದಾಗಿಸುವಲ್ಲಿ ನ್ಯಾಯಾಧೀಶರು ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *