ಕಲ್ಲಂಗಡಿಗಳಲ್ಲಿ ಹಣ್ಣು ಹೊತ್ತೊಯ್ದ ಜನರ ದೃಶ್ಯ.
ದೊಡ್ಡಬಳ್ಳಾಪುರ : ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಲ್ಲಂಗಡಿ ಸಾಗಿಸುತ್ತಿದ್ದ ಕ್ಯಾಂಟರ್ ಪಲ್ಟಿಯಾದ ಘಟನೆ ದೊಡ್ಡಬಳ್ಳಾಪುರ ಹೊರ ವಲಯದಲ್ಲಿ ನಡೆದಿದೆ.ದೊಡ್ಡಬಳ್ಳಾಪುರ ಹೊರ ವಲಯದ ಮೇಷ್ಟ್ರು ಮನೆ ಸರ್ಕಲ್ ಬಳಿ ಈ ಅಪಘಾತ ಸಂಭವಿಸಿದೆ. ಚೆನ್ನೈನಿಂದ ದಾವಣಗೆರೆಯ ಹೊನ್ನಾಳಿಗೆ ಕಲ್ಲಂಗಡಿ ಸಾಗಿಸುತ್ತಿದ್ದ ಈ ಕ್ಯಾಂಟರ್, ಅನಿರೀಕ್ಷಿತವಾಗಿ ನಿಯಂತ್ರಣ ಕಳೆದುಕೊಂಡಿದೆ. ವೇಗವಾಗಿ ಬರುತ್ತಿದ್ದ ಕ್ಯಾಂಟರ್ ಹೆದ್ದಾರಿಯಲ್ಲಿದ್ದ ಮೂರು ಡಿವೈಡರ್ಗಳನ್ನು ದಾಟಿ ಪಕ್ಕದ ಪಳ್ಳಕ್ಕೆ ಬಂದು ಬಿದ್ದಿದೆ. ಅಪಘಾತದ ತೀವ್ರತೆಗೆ ಕ್ಯಾಂಟರ್ನಲ್ಲಿದ್ದ ಸಾವಿರಾರು ಕಲ್ಲಂಗಡಿಗಳು ರಸ್ತೆಯ ಮೇಲೆ ಹಾಗೂ ಸುತ್ತಮುತ್ತ ಚಲ್ಲಾಪಿಲ್ಲಿಯಾಗಿ ಬಿದ್ದಿವೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು, ರಸ್ತೆಯ ಮೇಲೆ ಚೆಲ್ಲಿದ್ದ ಕಲ್ಲಂಗಡಿ ಹಣ್ಣುಗಳನ್ನು ಹೊತ್ತೊಯ್ದಿದ್ದಾರೆ. ಕೆಲವರು ತಮ್ಮ ವಾಹನಗಳಲ್ಲಿ ಕಲ್ಲಂಗಡಿಗಳನ್ನು ತುಂಬಿಕೊಂಡು ಹೋದ ದೃಶ್ಯ ಕಂಡುಬಂದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಘಟನೆಯಲ್ಲಿ ಕ್ಯಾಂಟರ್ ಚಾಲಕ ವೇದಮೂರ್ತಿ (22) ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಣ್ಣಪುಟ್ಟ ಗಾಯಗಳಾಗಿದ್ದು, ಚಾಲಕ ಚೇತರಿಸಿಕೊಳ್ಳುತ್ತಿದ್ದಾನೆ.
For More Updates Join our WhatsApp Group :




