ದರ್ಶನ್, ಇತರ ಆರೋಪಿಗಳನ್ನು ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲು CM ಸೂಚನೆ

ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್​​ಗೆ ರಾಜಾತಿಥ್ಯ ನೀಡಿದ್ದಾರೆ ಎನ್ನಲಾದ ಪ್ರಕರಣದ ಸಂಬಂಧ ಪ್ರತಿಕ್ರಿಯಿಸಿದ ಸಿಎಂ

ಬೆಂಗಳೂರು: ಪರಪ್ಪನ‌ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಮತ್ತಿತರರಿಗೆ ರಾಜಾತಿಥ್ಯ ಒದಗಿಸುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚಿಸಿದ್ದಾರೆ.

ದರ್ಶನ್ ಮತ್ತು ಇತರರನ್ನು ಕೂಡಲೇ ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡುವಂತೆ ಸಿಎಂ ತಾಕೀತು ಮಾಡಿದ್ದಾರೆ. ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸಿಎಂ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಈಗಾಗಲೇ ಪ್ರಕರಣ ಸಂಬಂಧ ಏಳು ಜನ ಜೈಲು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಶರವಣ, ಶರಣಬಸವ, ಪ್ರಭು.ಎಸ್, ಎಲ್.ಎಸ್.ತಿಪ್ಪೇಸ್ವಾಮಿ, ಶ್ರೀಕಾಂತ್ ತಳವಾರ್, ಹೆಡ್ ವಾರ್ಡರ್ನ್ ವೆಂಕಪ್ಪ, ಸಂತೋಷ್ ಕುಮಾರ್, ನರಸಪ್ಪ ಎಂಬವರನ್ನು ಅಮಾನತು ಮಾಡಿದ್ದೇವೆ. ಘಟನೆ ಬಗ್ಗೆ ವರದಿ ಕೇಳಿರುವುದಾಗಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಡಿಜಿ ಅವರು ಪರಪ್ಪನ ಅಗ್ರಹಾರಕ್ಕೆ ಭೇಟಿ ಕೊಟ್ಟಿದ್ದಾರೆ. ಇಂತಹ ಘಟನೆ ನಡೆಯಬಾರದು. ಯಾರು ಅವಕಾಶ ಕೊಟ್ಟಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಹಿರಿಯ ಅಧಿಕಾರಿಗಳನ್ನು ಅಲ್ಲಿಂದ ಶಿಫ್ಟ್ ಮಾಡ್ತೇವೆ ಎಂದು ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸರ್ಕಾರಕ್ಕೆ ಮುಜುಗರ ತರುತ್ತಿದೆ: ಈ ಬಗ್ಗೆ ಮಾತನಾಡಿರುವ ಸಚಿವ ಪ್ರಿಯಾಂಕ ಖರ್ಗೆ, ಜೈಲಲ್ಲಿ ಯಾರಿಗೂ ಸೌಲಭ್ಯ ಕೊಡಬೇಕು ಅಂತ ನಿಯಮ ಇಲ್ಲ. ಇದು‌ ಸರ್ಕಾರಕ್ಕೆ‌ ಮುಜುಗರ ತರುತ್ತಿದೆ. ಸುಮ್ಮನೆ ಊಹಾಪೋಹ ಬೇಡ. ಗೃಹ ಸಚಿವ ಪರಮೇಶ್ವರ್ ಇರಲಿ, ಯಾರೇ ಇರಲಿ, ಸಂವಿಧಾನ ಉಲ್ಲಂಘನೆ ಮಾಡಲ್ಲ. ಇಷ್ಟು ಹಂತಕ್ಕೆ ಬಂದಿದೆ ಎಂದರೆ ಸರ್ಕಾರದ ದೃಡ ನಿರ್ಧಾರ ಕಾರಣ. ಇದರ ಬಗ್ಗೆ ಆಂತರಿಕ ತನಿಖೆಗೆ ಕೊಟ್ಟಿದ್ದೇವೆ ಎಂದಿದ್ದಾರೆ.

Leave a Reply

Your email address will not be published. Required fields are marked *