ನಟ ಪವನ್ ಕಲ್ಯಾಣ್ ಈಗ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ಜೊತೆಗೆ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ನೀರು ಸರಬರಾಜು, ಪರಿಸರ, ಅರಣ್ಯ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆಗಳ ಮಂತ್ರಿ ಸಹ ಆಗಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಿರುವಾಗಲೇ ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ನಟಿಸುವುದನ್ನು ಸಹ ಮುಂದುವರೆಸಿದ್ದಾರೆ. ಆದರೆ ಇದೀಗ ಮಾಜಿ ಐಎಎಸ್ ಅಧಿಕಾರಿಯೊಬ್ಬರು ಪವನ್ ಕಲ್ಯಾಣ್ ವಿರುದ್ಧ ಹೈಕೋರ್ಟ್ನಲ್ಲಿ ದೂರು ನೀಡಿದ್ದಾರೆ.
ಪವನ್ ಕಲ್ಯಾಣ್, ಸರ್ಕಾರದ ಭಾಗವಾಗಿ ಕೆಲವು ಮಹತ್ವದ ಸಚಿವಾಲಯಗಳ ಜವಾಬ್ದಾರಿ ಹೊತ್ತಿರುವಾಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳಿಂದ ಆದಾಯವನ್ನು ಪಡೆಯುತ್ತಿದ್ದಾರೆ ಎಂದು ಮಾಜಿ ಐಎಎಸ್ ಅಧಿಕಾರಿ ಮತ್ತು ಲಿಬರೇಷನ್ ಕಾಂಗ್ರೆಸ್ ಪಾರ್ಟಿಯ ಸಂಸ್ಥಾಪಕ ಜಿ ವಿಜಯ್ ಕುಮಾರ್ ಅವರು ಪವನ್ ಕಲ್ಯಾಣ್ ವಿರುದ್ಧ ಆಂಧ್ರ ಪ್ರದೇಶ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸಚಿವಾಲಯಗಳನ್ನು ನಿಭಾಯಿಸುತ್ತಿದ್ದರೂ ಸಹ ಸಿನಿಮಾಗಳಲ್ಲಿ ನಟಿಸುತ್ತಿರುವ, ಸಿನಿಮಾ ವ್ಯವಹಾರಗಳೊಂದಿಗೆ ಸಂಬಂಧ ಇರಿಸಿಕೊಂಡಿರುವ ಬಗ್ಗೆ ತನಿಖೆ ನಡೆಸಲು ಆದೇಶಿಸಬೇಕೆಂದು ಮಾಜಿ ಐಎಎಸ್ ಅಧಿಕಾರಿ ಕೋರಿದ್ದಾರೆ. ಅಲ್ಲದೆ, ತಮ್ಮ ನಟನೆಯ ಸಿನಿಮಾ ಹಾಗೂ ಇನ್ನಿತರೆ ಸಿನಿಮಾಗಳ ಟಿಕೆಟ್ ದರ ಹೆಚ್ಚಳ ವಿಷಯದಲ್ಲಿ ತಮ್ಮ ಅಧಿಕಾರದ ದುರುಪಯೋಗವನ್ನು ಪವನ್ ಕಲ್ಯಾಣ್ ಮಾಡಿಕೊಂಡಿರುವ ಗುಮಾನಿ ಇದ್ದು, ಈ ಬಗ್ಗೆ ಸಿಬಿಐ ಹಾಗೂ ಇಡಿ ತನಿಖೆಗಳು ನಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ. ಅಲ್ಲದೆ ಪವನ್ ವಿರುದ್ಧ ಹಿತಾಸಕ್ತಿ ಸಂಘರ್ಷ (ಕಾನ್ಫ್ಲಿಕ್ಟ್ ಆಫ್ ಇಂಟರೆಸ್ಟ್) ಅಡಿಯಲ್ಲಿ ತನಿಖೆ ನಡೆಸಿ, ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಸಹ ಕೋರಿದ್ದಾರೆ.
ಸಚಿವರಾಗಿದ್ದಾಗಲೂ ಸಹ ಸಿನಿಮಾಗಳಲ್ಲಿ ನಟಿಸುತ್ತಿರುವುದು ಅಸಾಂವಿಧಾನಿಕ, ಅನೈತಿಕ ಹಾಗೂ ನಿಯಮಕ್ಎ ಬಾಹಿರ ಎಂದು ಆರೋಪ ಮಾಡಲಾಗಿದ್ದು, ಕೇಂದ್ರ ಸರ್ಕಾರ ವಿಧಿಸಿರುವ ಸಾರ್ವಜನಿಕ ಹೊಣೆಗಾರಿಕೆ ನಿಯಮಗಳಿಗೆ ವಿರುದ್ಧವಾಗಿ ಪವನ್ ಕಲ್ಯಾಣ್ ನಡೆದುಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಪವನ್ ಕಲ್ಯಾಣ್, ಆಂಧ್ರ ವಿಧಾನಸಭೆ ಚುನಾವಣೆಗೆ ಧುಮುಕುವ ಮೊದಲು ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಚುನಾವಣೆ ಬಂದು, ಪವನ್ ಕಲ್ಯಾಣ್ ಚುನಾವಣೆ ಪ್ರಚಾರದಲ್ಲಿ ತೊಡಗಿದ ಕಾರಣ ಆ ಸಿನಿಮಾಗಳ ಚಿತ್ರೀಕರಣ ಪೂರ್ಣವಾಗಿರಲಿಲ್ಲ. ಹಾಗಾಗಿ ಪವನ್ ಕಲ್ಯಾಣ್ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಕೆಲ ತಿಂಗಳ ತರುವಾಯ ಈಗ ಮತ್ತೆ ಆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಸಿನಿಮಾ ಬಿಡುಗಡೆ ಆಗಿದೆ. ಇದೀಗ ‘ಉಸ್ತಾದ್ ಭಗತ್ ಸಿಂಗ್’ ಮತ್ತು ‘ಓಜಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳ ಚಿತ್ರೀಕರಣ ಶೀಘ್ರವೇ ಮುಕ್ತಾಯವಾಗಲಿದೆ.
