ಡೆಹ್ರಾಡೂನ್: ಧರ್ಮದ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಮದರಸಾಗಳ ಮೇಲೆ ಅಧಿಕಾರಿಗಳು ಆಪರೇಷನ್ ಶುರುಮಾಡಿದ್ದಾರೆ. ಕೇವಲ 15 ದಿನಗಳಲ್ಲಿ 52 ಅಕ್ರಮ ಮದರಸಾಗಳನ್ನು ಸೀಲ್ ಮಾಡಲಾಗಿದೆ.
ಅಕ್ರಮ ಮದರಸಾಗಳ ಮೇಲೆ ಕ್ರಮ ಕೈಗೊಳ್ಳುವಂತೆ ಉತ್ತರಾಖಂಡ (Uttarakhand) ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಸೂಚನೆ ಬೆನ್ನಲ್ಲೇ ಅಧಿಕಾರಿಗಳು ರಾಜ್ಯಾದ್ಯಂತ 52ಕ್ಕೂ ಹೆಚ್ಚು ನೋಂದಣಿಯಾಗದ ಮತ್ತು ಕಾನೂನುಬಾಹಿರವಾಗಿ ನಡೆಸುತ್ತಿದ್ದ ಮದರಸಾಗಳನ್ನು ಸೀಲ್ ಮಾಡಿದ್ದಾರೆ.
ಪಶ್ಚಿಮ ಡೆಹ್ರಾಡೂನ್ ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಅನಧಿಕೃತ ಮದರಸಾಗಳ ಸಂಖ್ಯೆ ಬೆಳೆಯುತ್ತಿದೆ. ಧಾರ್ಮಿಕ ಶಿಕ್ಷಣಕ್ಕಾಗಿ ಮಾತ್ರವಲ್ಲದೇ ಜನಸಂಖ್ಯಾ ಸಮತೋಲನವನ್ನು ಭಂಗಗೊಳಿಸುವ ವೇದಿಕೆಗಳಾಗಿಯೂ ಅಕ್ರಮ ಮದರಸಾಗಳನ್ನು ಬಳಸಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಈ ವರದಿಯನ್ನು ಆಧರಿಸಿ ಅಕ್ರಮ ಮದರಸಾಗಳನ್ನು ಬಂದ್ ಮಾಡುವಂತೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೂಚನೆ ನೀಡಿದ್ದರು. ಸಿಎಂ ಸೂಚನೆ ಮೇರೆಗೆ 52 ಮದರಸಾಗಳಿಗೆ ಬೀಗ ಹಾಕಲಾಗಿದೆ.
ಸೋಮವಾರವಷ್ಟೇ, ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಡೆಹ್ರಾಡೂನ್ನ ವಿಕಾಸನಗರದಲ್ಲಿ 12 ಅಕ್ರಮ ಮದರಸಾಗಳು ಮತ್ತು ಖತಿಮಾದಲ್ಲಿ 9 ಮದರಸಾಗಳನ್ನು ಸೀಲ್ ಮಾಡಲಾಗಿತ್ತು. ಇದಕ್ಕೂ ಮೊದಲು, ವಿವಿಧ ಜಿಲ್ಲೆಗಳಲ್ಲಿ ಅಂತಹ 31 ಮದರಸಾಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು ಸಿಎಂ ಕಚೇರಿ ತಿಳಿಸಿದೆ. ಕಾನೂನು ಉಲ್ಲಂಘಿಸುವ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಎಚ್ಚರಿಕೆ ನೀಡಿದ್ದಾರೆ.