ಹರಿಯಾಣ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನಿ ಪಡೆಗಳು ಬುಧವಾರ ನಡೆಸಿದ ಭಾರೀ ಶೆಲ್ ದಾಳಿಯಲ್ಲಿ ಭಾರತೀಯ ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ (ಡಬ್ಲ್ಯೂಕೆಸಿ) ಪ್ರಕಾರ, 5 ಫೀಲ್ಡ್ ರೆಜಿಮೆಂಟ್ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಅವರು ಪಾಕಿಸ್ತಾನ ಸೇನೆಯ ಶೆಲ್ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ. ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಗಡಿಯಲ್ಲಿ ಪಾಕ್ ಸೇನೆ ತೀವ್ರ ಅಪ್ರಚೋದಿತ ದಾಳಿ ಮಾಡಿತ್ತು.
ಯೋಧನ ಮನೆಯಲ್ಲಿ ಶೋಕ: ಹರಿಯಾಣದ ಪಲ್ವಾಲ್ ಜಿಲ್ಲೆಯ ಸೈನಿಕ ದಿನೇಶ್ ಹುತಾತ್ಮರಾದವರು. ದಿನೇಶ್ ಅವರ ಸಾವಿನ ವಿಚಾರ ತಿಳಿದು ಅವರ ಮನೆಯಲ್ಲಿ ಶೋಕ ಆವರಿಸಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಹುತಾತ್ಮ ದಿನೇಶ್ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲಾಗುತ್ತಿದೆ. ಅಲ್ಲಿಯೇ ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ದಿನೇಶ್ ಅವರು ಬಾರಾಮುಲ್ಲಾದಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು. ಪಾಕಿಸ್ತಾನ ಪಡೆಗಳಿಂದ ಗುಂಡಿನ ದಾಳಿ ಆರಂಭವಾದ ತಕ್ಷಣವೇ ದಿನೇಶ್ ಹಾಗೂ ನಮ್ಮ ಭದ್ರತಾ ಪಡೆ ಪ್ರತಿದಾಳಿಯನ್ನು ಆರಂಭಿಸಿದ್ದರು. ಈ ವೇಳೆ ಪಾಕಿಸ್ತಾನದಿಂದ ಹಾರಿಸಲಾದ ಮೋರ್ಟಾರ್ ಗುಂಡು ತಗುಲಿ ದಿನೇಶ್ ಜೊತೆ ಇತರ 5 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಿನೇಶ್ ಹುತಾತ್ಮರಾಗಿದ್ದಾರೆ.
13 ಜನ ಸಾವು: ಜಮ್ಮು ಮತ್ತು ಕಾಶ್ಮೀರದ ಎಲ್ಒಸಿ ಉದ್ದಕ್ಕೂ ಇರುವ ಹಳ್ಳಿಗಳನ್ನು ಗುರಿಯಾಗಿಸಿಕೊಂಡ ಪಾಕಿಸ್ತಾನ ಸೇನೆ ಬುಧವಾರ ನಡೆಸಿರುವ ಫಿರಂಗಿ ಮತ್ತು ಮೋರ್ಟಾರ್ ಶೆಲ್ ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
“ಭಾರತವು ತನ್ನ ನೆಲದ ಮೇಲಿನ ದಾಳಿಗೆ ‘ಪ್ರತಿಕ್ರಿಯಿಸುವ ಹಕ್ಕನ್ನು’ ಚಲಾಯಿಸಿದೆ ಮತ್ತು ಪ್ಲಾನ್ ಪ್ರಕಾರ ಗುರಿಗಳನ್ನು ನಿಖರವಾಗಿ ನಾಶಪಡಿಸಿದೆ” ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು.