ಗಣರಾಜ್ಯೋತ್ಸವ ಹಿನ್ನೆಲೆ ಭದ್ರತೆ ಹೆಚ್ಚಳ; ಮುಂಚಿತ ಆಗಮನಕ್ಕೆ ಮನವಿ.
ದೇವನಹಳ್ಳಿ: ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಏರ್ಪೋರ್ಟ್ಗೆ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಸ್ಕ್ರೀನಿಂಗ್, ಲಗೇಜ್ ಚೆಕ್ಕಿಂಗ್, ಚೆಕ್ ಇನ್ನಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಸಿಐಎಸ್ಎಫ್ ಸಿಬ್ಬಂದಿ ಕೈಗೊಂಡಿದ್ದು, ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಬೇಗ ಬರುವಂತೆ ಏರ್ಪೋರ್ಟ್ ಆಡಳಿತ ಮಂಡಳಿ ಸೂಚನೆ ನೀಡಿದೆ. ದೀರ್ಘ ವಾರಾಂತ್ಯದ ಹಿನ್ನೆಲೆಯಲ್ಲಿ ಪ್ರಯಾಣಿಕರ ಭಾರೀ ಆಗಮನ ನಿರೀಕ್ಷೆ ಹಿನ್ನೆಲೆ ಈ ಮನವಿ ಮಾಡುತ್ತಿರೋದಾಗಿ ತಿಳಿಸಿದೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗುತ್ತಿರುವುದರಿಂದ ವಿಮಾನ ನಿಲ್ದಾಣಕ್ಕೆ ತೆರಳಲು, ಚೆಕ್-ಇನ್ ಹಾಗೂ ಭದ್ರತಾ ತಪಾಸಣೆಗೆ ಹೆಚ್ಚುವರಿ ಸಮಯವನ್ನು ಗಮನದಲ್ಲಿಟ್ಟುಕೊಂಡು ಆಗಮಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಹೆಚ್ಚುವರಿ ಭದ್ರತಾ ಕ್ರಮಗಳ ಕಾರಣ ಪ್ರವೇಶ ದ್ವಾರಗಳು ಹಾಗೂ ಭದ್ರತಾ ತಪಾಸಣೆಯಲ್ಲಿ ಸಮಯ ಹೆಚ್ಚು ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕೊನೆ ಕ್ಷಣದ ವಿಳಂಬ ಅಥವಾ ವಿಮಾನ ತಪ್ಪುವ ಪರಿಸ್ಥಿತಿಯಿಂದ ದೂರ ಉಳಿಯಲು ತುಸು ಮೊದಲೇ ಆಗಮಿಸುವಂತೆ ಪ್ರಯಾಣಿಕರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲದೆ, ಚೆಕ್-ಇನ್ ಸಮಯ ಮತ್ತು ಬೋರ್ಡಿಂಗ್ ವಿವರಗಳು ಸೇರಿದಂತೆ ವಿಮಾನಕ್ಕೆ ಸಂಬಂಧಿಸಿದ ಮಾಹಿತಿಗಾಗಿ ತಮ್ಮ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ನೇರವಾಗಿ ಸಂಪರ್ಕಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.
ಗಣರಾಜ್ಯೋತ್ಸವದ ದೀರ್ಘ ವಾರಾಂತ್ಯದ ವೇಳೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. ಜೊತೆಗೆ, ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿರುವುದರಿಂದ, ಎಲ್ಲ ಪ್ರಯಾಣಿಕರು ಚೆಕ್-ಇನ್ ಮತ್ತು ಭದ್ರತಾ ಪ್ರಕ್ರಿಯೆಗಳಿಗೆ ಸಾಕಷ್ಟು ಸಮಯವನ್ನು ಮೀಸಲಿಡುವಂತೆ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ವಿಮಾನಕ್ಕೆ ಸಂಬಂಧಿಸಿದ ಮಾಹಿತಿಗಾಗಿ ದಯವಿಟ್ಟು ನಿಮ್ಮ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಎಕ್ಸ್ ಪೋಸ್ಟ್ ಮೂಲಕ ವಿಮಾನ ನಿಲ್ದಾನ ಆಡಳಿತ ಮಂಡಳಿ ಮನವಿ ಮಾಡಿದೆ.
For More Updates Join our WhatsApp Group :




