ರಾಂಚಿ: ಮುಖ್ಯನ್ಯಾಯಮೂರ್ತಿಗಳ ಮೇಲೆ ವಕೀಲರೊಬ್ಬರು ಶೂ ಎಸೆದ ಪ್ರಕರಣದ ನೆನಪು ಮಾಡುವ ಮೊದಲೇ ಅಂತಹುದೇ ರೀತಿಯ ಮತ್ತೊಂದು ಪ್ರಕರಣ ಜಾರ್ಖಂಡ್ ಹೈಕೋರ್ಟ್ನಲ್ಲಿ ನಡೆದಿದೆ. ಇಲ್ಲಿ ಹಿರಿಯ ವಕೀಲರೊಬ್ಬರು ಜಡ್ಜ್ ಅವರಿಗೆ ಹದ್ದು ಮೀರಿ ವರ್ತಿಸದಿರಿ ಎಂದು ಎಚ್ಚರಿಸಿದ ಘಟನೆ ನಡೆದಿದೆ. ಅಕ್ಟೋಬರ್ 16ರಂದು ರಾಂಚಿಯಲ್ಲಿರುವ ಜಾರ್ಖಂಡ್ ಹೈಕೋರ್ಟ್ನ ಕೋರ್ಟ್ ರೂಮ್ 24ರಲ್ಲಿ ನಡೆದಿದೆ. ಈ ಘಟನೆ ಬೆನ್ನಲ್ಲೇ ಅಡ್ವೋಕೇಟ್ ವಿರುದ್ಧ ಉಚ್ಚ ನ್ಯಾಯಾಲಯವು ಸುವೋಮೋಟೋ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸುತ್ತಿದೆ.
ಹದ್ದು ಮೀರಿ ವರ್ತಿಸದಿರಿ ಎಂದು ಜಡ್ಜ್ಗೆ ಅಡ್ವೋಕೇಟ್ ಹೇಳಿದ್ದು ಯಾಕೆ?
ವ್ಯಕ್ತಿಯೊಬ್ಬರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಕೋರ್ಟ್ ರೂಮ್ 24ರಲ್ಲಿ ನಡೆಯುತ್ತಿತ್ತು. ಗ್ರಾಹಕರ ಪರ ಮಹೇಶ್ ತಿವಾರಿ ವಕಾಲತು ವಹಿಸಿಕೊಂಡು ವಾದಿಸುತ್ತಿದ್ದರು. ನ್ಯಾ| ರಾಜೇಶ್ ಕುಮಾರ್ ಅವರು ಜಡ್ಜ್ ಆಗಿದ್ದರು.
ಈ ವೇಳೆ ವಕೀಲರು ವಾದ ಮಾಡಿದ ರೀತಿ ಬಗ್ಗೆ ಜಡ್ಜ್ ಅಸಮಾಧಾನದಿಂದ ಏನೋ ಕಾಮೆಂಟ್ ಮಾಡಿದ್ದಾರೆ. ಆಗ ತಿವಾರಿ ಸಿಟ್ಟಿಗೆದ್ದಂತೆ ಕಾಣುತ್ತದೆ. ‘ನಾನು ನನ್ನದೇ ರೀತಿಯಲ್ಲಿ ವಾದ ಮಾಡುತ್ತೇನೆ. ನೀವು ಹೇಳುವ ರೀತಿಯಲ್ಲಲ್ಲ…. ನೀವು ನಿಮ್ಮ ಮಿತಿ ದಾಟಿ ಹೋಗಬೇಡಿ. ಈ ದೇಶ ಹೊತ್ತಿ ಉರಿಯುತ್ತಿದೆ, ನ್ಯಾಯಾಂಗದ ಜೊತೆಗೆ. ಯಾವುದೇ ವಕೀಲರನ್ನು ನೀವು ಅವಮಾನಿಸಬೇಡಿ. ನಾನು 40 ವರ್ಷದಿಂದ ವಕೀಲಿಕೆ ಮಾಡುತ್ತಿದ್ದೇನೆ..’ ಎಂದು ಮಹೇಶ್ ತಿವಾರಿ ಹೇಳಿದರು.
ಸಹ-ವಕೀಲರು ತಿವಾರಿಯನ್ನು ಸಮಾಧಾನಗೊಳಿಸಿದರು. ಈ ಘಟನೆಯಿಂದ ನ್ಯಾಯಾಧೀಶರಾದ ರಾಜೇಶ್ ಕುಮಾರ್ ಮತ್ತಷ್ಟು ಅಸಮಾಧಾನಗೊಂಡಂತಿತ್ತು. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಡ್ವೋಕೇಟ್ ಮಾಡಿದ್ದು ಸರಿ ಎಂದು ಕೆಲವರು ಹೇಳಿದರು, ನ್ಯಾಯಾಧೀಶರಿಗೆ ಬೆಲೆಯೇ ಇಲ್ಲದಂಥ ಸ್ಥಿತಿ ಬಂದಿದೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಾರ್ಖಂಡ್ ಹೈಕೋರ್ಟ್ನಿಂದ ಅಡ್ವೋಕೇಟ್ ವಿರುದ್ಧ ಪ್ರಕರಣ
ಇದೇ ವೇಳೆ ಅಡ್ವೋಕೇಟ್ ಮಹೇಶ್ ತಿವಾರಿ ವಿರುದ್ಧ ಜಾರ್ಖಂಡ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ (ಸುವೋಮೋಟೋ) ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ. ಜಾರ್ಖಂಡ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ತಾರಲೋಕ್ ಸಿಂಗ್ ಚೌಹಾಣ್, ನ್ಯಅಯಮೂರ್ತಿಗಳಾದ ಸುಜಿತ್ ನಾರಾಯಣ್ ಪ್ರಸಾದ್, ರಂಗೋನ್ ಮುಖೋಪಾಧ್ಯಾಯ್, ಆನಂದ ಸೇನ್ ಮತ್ತು ರಾಜೇಶ್ ಶಂಕರ್ ಅವರಿರುವ ಹೈಕೋರ್ಟ್ ನ್ಯಾಯಪೀಠವು ಇದರ ವಿಚಾರಣೆ ನಡೆಸಲಿದೆ. ವಕೀಲ ಮಹೇಶ್ ತಿವಾರಿಗೆ ನೋಟೀಸ್ ಕೊಡಲಾಗಿದ್ದು, ಮೂರು ವಾರಗಳೊಳಗೆ ಉತ್ತರಿಸುವಂತೆ ಆದೇಶಿಸಲಾಗಿದೆ.
For More Updates Join our WhatsApp Group :