ಮಡಿಕೇರಿ: ಪತ್ನಿ ತನ್ನ ಎರಡನೇ ಗಂಡನೊಂದಿಗೆ ಮತ್ತೆ ಸಂಬಂಧ ಬೆಳೆಸಿದ್ದಾಳೆ ಎಂದು ಶಂಕಿಸಿದ ಮೂರನೇ ಗಂಡ, ಪತ್ನಿ ಸೇರಿ ನಾಲ್ವರನ್ನು ಹತ್ಯೆಗೈದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಬೇಗೂರು ಸಮೀಪದ ಬಾಳಂಗಾಡು ಗ್ರಾಮದಲ್ಲಿ ನಡೆದಿತ್ತು. ಹತ್ಯೆಗೈದ ಆರೋಪಿಯನ್ನು 9 ಗಂಟೆಯೊಳಗೆ ಕೇರಳದಲ್ಲಿ ಬಂಧಿಸುವಲ್ಲಿ ವಿಶೇಷ ತನಿಖಾ ತಂಡ ಯಶಸ್ವಿಯಾಗಿದೆ.

ಹತ್ಯೆಯಾದವರನ್ನು ಕರಿಯ (75) ಗೌರಿ (70) ನಾಗಿ (35) ಹಾಗೂ ಕಾವೇರಿ (7) ಎಂದು ಗುರುತಿಸಲಾಗಿದೆ. ಗಿರೀಶ್ (35) ಹತ್ಯೆಗೈದ ಆರೋಪಿಯಾಗಿದ್ದಾನೆ.
ಕೊಡಗಿನ ಬೇಗೂರು ಗ್ರಾಮದ ಬಾಳಂಗಾಡು ಎಂಬಲ್ಲಿ ಗುರುವಾರ ರಾತ್ರಿ ಈ ಅಮಾನುಷ ಹತ್ಯೆ ನಡೆದಿದೆ. ಬಾಳಂಗಾಡು ಎಂಬಲ್ಲಿ ಒಂಟಿ ಮನೆಯಲ್ಲಿ ಹತ್ಯೆಯಾದ ನಾಲ್ವರು ಸೇರಿದಂತೆ ಗಿರೀಶ್ ಕೂಡ ವಾಸವಾಗಿದ್ದರು. ಆರೋಪಿ ಗಿರೀಶ್ ನಾಗಿಯ ಮೂರನೇ ಗಂಡನಾಗಿದ್ದು, ಕಳೆದ ಒಂದು ವರ್ಷದಿಂದ ಒಟ್ಟಿಗೆ ನೆಲೆಸಿದ್ದರು. ಆದರೆ ನಾಗಿ ತನ್ನ ಎರಡನೇ ಪತಿಯೊಂದಿಗೆ ಮತ್ತೆ ಸಂಬಂಧ ಬೆಳೆಸಿದ್ದಾಳೆ ಎಂದು ಗಿರೀಶ್ಗೆ ಸಂಶಯ ವ್ಯಕ್ತವಾಗಿತ್ತು. ಇದರಿಂದ ಗುರುವಾರ ರಾತ್ರಿ ಎಲ್ಲರು ಮಲಗಿರುವಾಗ ನಾಲ್ವರನ್ನು ಕತ್ತಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.
ಮಾರನೇ ದಿನ ಶುಕ್ರವಾರ ಮದ್ಯಾಹ್ನ 1.30ರ ಸುಮಾರಿಗೆ ಪೊನ್ನಂಪೇಟೆ ಠಾಣೆಯ ಪೊಲೀಸರಿಗೆ (Ponnampete Police Staion) ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾನ್ ಭೇಟಿ ನಿಡಿ, ಪರಿಶೀಲನೆ ನಡೆಸಿದ್ದರು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ವಿರಾಜಪೇಟೆ (Virajapet) ಉಪವಿಭಾಗದ ಡಿಎಸ್ಪಿರವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ಕಾರ್ಯಾಚರಣೆಗಿಳಿಯಲಾಗಿತ್ತು. ಕೃತ್ಯ ನಡೆದ 6 ಗಂಟೆಯ ಒಳಗಾಗಿ ಕೇರಳದ ತಲಪುಳ ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ.
ಈ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಉತ್ತಮ ರೀತಿ ಕಾರ್ಯ ನಿರ್ವಹಿಸಿರುವ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜಾನ್ ಅವರು ಶ್ಲಾಘಿಸಿದ್ದಾರೆ.