ನವದೆಹಲಿ: ‘ಒಂದು ದೇಶ ಒಂದು ಚುನಾವಣೆ’ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಈ ವ್ಯವಸ್ಥೆ ಜಾರಿಗಾಗಿ ಸಂವಿಧಾನ ತಿದ್ದುಪಡಿಗೆ ಪ್ರಧಾನಿಯವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ದೇಶದ ಅಭಿವೃದ್ಧಿಗೆ ಕೈಗೊಂಡ ಈ ತೀರ್ಮಾನವನ್ನು ವಿರೋಧಿಸುವವರು ‘ದೇಶದ ಅಭಿವೃದ್ಧಿ ವಿರೋಧಿಗಳು’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ತರಲು ಸಂವಿಧಾನ ತಿದ್ದುಪಡಿಗೆ ಒಪ್ಪಿಗೆ ನೀಡಿದೆ. ಅದನ್ನು ಇದೇ ಸಂಸತ್ ಅಧಿವೇಶನದಲ್ಲಿ ಮಂಡಿಸುವ ವಿಚಾರವಿದೆ. ಭವಿಷ್ಯದಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಆಗಬೇಕಾದರೆ ಪ್ರತಿನಿತ್ಯ ಚುನಾವಣೆ ಮಾಡಲು ಅಸಾಧ್ಯ ಎಂದರು.
ಈ ದೇಶದಲ್ಲಿ ಸಹಕಾರಿ ವ್ಯವಸ್ಥೆಯಿಂದ ಹಿಡಿದು, ಪಂಚಾಯತಿ ಚುನಾವಣೆ, ವಿಧಾನಸಭೆ ಲೋಕಸಭೆವರೆಗೆ ಒಂದಿಲ್ಲ ಒಂದು ಚುನಾವಣೆ ನಡೆಯುತ್ತಲೇ ಇರುತ್ತವೆ. ಪ್ರತಿ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತದೆ ಅಷ್ಟೇ ಅಲ್ಲ ಆ ದಿನಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರ ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ಮಾಡಲು ನಿರ್ಧರಿಸಿದೆ. ಇದರಿಂದ ಆಡಳಿತದಲ್ಲಿ ಸ್ಥಿರತೆ ಬರುತ್ತದೆ. ಅಭಿವೃದ್ಧಿ ಸ್ಥಿರತೆ ಬಹಳ ಮುಖ್ಯ. ಬೇರೆ ಯಾವ ದೇಶಗಳಲ್ಲಿಯೂ ಈ ರೀತಿಯ ವ್ಯವಸ್ಥೆ ಇಲ್ಲ ಎಂದು ಅವರು ತಿಳಿ ಹೇಳಿದರು. ಆದ್ದರಿಂದ ಆಗಾಗ ನಡೆಯುತ್ತಿರುವ ಚುನಾವಣೆ ವ್ಯವಸ್ಥೆಗೆ ಇತಿಶ್ರೀ ಹಾಡಬೇಕೆಂದು ದಶಕಗಳಿಂದ ಚರ್ಚೆ ನಡೆಯುತ್ತಿತ್ತು. ನಮ್ಮ ಪ್ರಧಾನಮಂತ್ರಿಗಳು ಒಂದು ದಿಟ್ಟ ನಿರ್ಧಾರ ಮಾಡಿದ್ದಾರೆ. ಇದು ದೂರಗಾಮಿಯಾಗಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಈ ದೇಶಕ್ಕೆ ಒಳ್ಳೆಯದಾಗುವಂತಹ ನಿರ್ಧಾರ. ಇದಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿಯ ಶಿಫಾರಸಿನ ಅನ್ವಯ ಈ ಬದಲಾವಣೆ ತರುತ್ತಿದ್ದಾರೆ.
ಇದಕ್ಕೆ ಎಲ್ಲರೂ ಚರ್ಚೆ ಮಾಡಬೇಕು, ಸ್ವಾಗತ ಮಾಡಬೇಕು. ದೇಶದ ಎಲ್ಲ ಜನರೂ ಸ್ವಾಗತಿಸಬೇಕು. ಇದನ್ನು ವಿರೋಧಿಸುವವರು ದೇಶದ ಅಭಿವೃದ್ಧಿಯ ವಿರೋಧಿಗಳಾಗಿದ್ದಾರೆ. ರಾಜಕೀಯ ಕಾರಣಗಳಿಗೆ ಇದನ್ನು ಕೆಲವರು ವಿರೋಧಿಸುತ್ತಿದ್ದಾರೆ. ಆದರೆ, ಇಡೀ ದೇಶ ಈ ಬದಲಾವಣೆಯ ಪರವಾಗಿ ನಿಲ್ಲಬೇಕು. ಈ ದಿಟ್ಟ ತೀರ್ಮಾನ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರಗೆ ಸಂಸದರು ಅಭಿನಂದಿಸಿದರು.