ನವದೆಹಲಿ || ಬ್ರಿಟಿಷರ ಮೆಂಟಾಲಿಟಿ ಸಿದ್ದರಾಮಯ್ಯನವರದ್ದು – ನೆಟ್ಟಗೆ ಆಡಳಿತ ಮಾಡಿ, ಇಲ್ಲವೇ ರಾಜೀನಾಮೆ ಕೊಡಿ: ಶೋಭಾ ಕರಂದ್ಲಾಜೆ

ನವದೆಹಲಿ || ಬ್ರಿಟಿಷರ ಮೆಂಟಾಲಿಟಿ ಸಿದ್ದರಾಮಯ್ಯನವರದ್ದು – ನೆಟ್ಟಗೆ ಆಡಳಿತ ಮಾಡಿ, ಇಲ್ಲವೇ ರಾಜೀನಾಮೆ ಕೊಡಿ: ಶೋಭಾ ಕರಂದ್ಲಾಜೆ

ನವದೆಹಲಿ: ಸಿದ್ದರಾಮಯ್ಯ (Siddaramaiah) ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣರ ಉಪಜಾತಿಗಳನ್ನ ಒಡೆಯುವ ಪ್ರಯತ್ನ ಮಾಡ್ತಿದ್ದಾರೆ, ಬ್ರಿಟಿಷರ ಮೆಂಟಾಲಿಟಿ ಅವರದ್ದು. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಕೇಂದ್ರದತ್ತ ಬೊಟ್ಟು ಮಾಡುವುದನ್ನು ಬಿಟ್ಟು, ನೆಟ್ಟಗೆ ಆಡಳಿತ ಮಾಡಿ ಇಲ್ಲವೇ ರಾಜೀನಾಮೆ ಕೊಡಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿಂದು (Delhi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿನಿತ್ಯ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದೇ ಗ್ಯಾರಂಟಿಗಳಿಂದ, ಆದ್ರೆ ಗ್ಯಾರಂಟಿಗಳು ಜನರಿಗೆ ತಲುಪುತ್ತಿಲ್ಲ. ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ತಲುಪುತ್ತಿಲ್ಲ, ಬಸ್ ಫ್ರೀ ಅಂತಾ ಹೇಳಿದ್ರು ಬಸ್ ನಿಲ್ಲಿಸಿದ್ರು, ಡಿಪೋದಿಂದ ಬಸ್ ಬಿಡುತ್ತಿಲ್ಲ. ಸಿದ್ದರಾಮಯ್ಯ ಯೋಜನೆಗಳು ನಿಂತಿದೆಯಾ ಎಂದು ಕೇಳಿದ್ದಾರೆ. ಹಣಕಾಸು ಇಲಾಖೆ (Finance Department) ಇಟ್ಟುಕೊಂಡು ಸಿದ್ದರಾಮಯ್ಯ ಅವರಿಗೇ ಗೊತ್ತಿಲ್ಲ ಅಂದ್ರೆ ಹೇಗೆ? ಅಂತ ಪ್ರಶ್ನೆ ಮಾಡಿದ್ದಾರೆ.

10 ಕೆಜಿ ಕೊಡ್ತಿವಿ ಅಂದಿದ್ರು ಈಗ ಅಕ್ಕಿ ಕೊಡ್ತಿಲ್ಲ. ಕೇಂದ್ರ ಸರ್ಕಾರ ಅಕ್ಕಿಕೊಡಲು ರೆಡಿ ಇದ್ದರೂ ರಾಜ್ಯ ತೆಗೆದುಕೊಳ್ಳುತ್ತಿಲ್ಲ. ಹೊಸ 9 ವಿವಿ ಬಂದ್ ಮಾಡಿದ್ದಾರೆ. ಹಳೆಯ ವಿವಿಗಳಿಗೆ ಹಣವನ್ನೇ ಕೊಡ್ತಿಲ್ಲ. ಹಾಗಾದ್ರೆ ಹೊಸ ವಿವಿಯಿಂದ ಸರ್ಟಿಫಿಕೇಟ್ ಪಡೆದವರ ಕಥೆ ಏನು..? ಇದಕ್ಕೆ ಯಾವುದೆ ಸ್ಪಷ್ಟತೆಯನ್ನು ಸರ್ಕಾರ ಕೊಟ್ಟಿಲ್ಲ. ಕಂದಾಯ ಇಲಾಖೆಯಲ್ಲಿ ಸಿಬ್ಬಂದಿಗೆ ಸಂಬಳ ಕೊಟ್ಟಿಲ್ಲ. ಈ ನಡುವೆ ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ಟ್ಯಾಕ್ಸ್ ವ್ಯವಸ್ಥೆ ಜಾರಿಯಾಗಿದೆ. ಬೆಂಗಳೂರಿನಲ್ಲಿ ಬಿಲ್ಡಿಂಗ್ ಕಟ್ಟಬೇಕು ಅಂದ್ರೆ ಅಡಿಗೆ 100 ರೂ. ಕೊಡಬೇಕಾಗಿದೆ ಎಂದು ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ

ಇದೇ ವೇಳೆ ಮೆಟ್ರೋ ದರ ಏರಿಕೆ ಕುರಿತು ಮಾತನಾಡಿ, ಮೆಟ್ರೋ ಟಿಕೆಟ್‌ ದರ ಏರಿಕೆ ಬಗ್ಗೆ ಸಿದ್ದರಾಮಯ್ಯ ಸುಳ್ಳು ಹೇಳಿದ್ದಾರೆ. ಕರ್ನಾಟಕ ಸರ್ಕಾರ ಶಿಫಾರಸ್ಸಿನ ಮೇರೆಗೆ ದರ ಏರಿಕೆ ಮಾಡಲಾಗಿದೆ. ಮೆಟ್ರೋ ಅಧಿಕಾರಿ ದರ ಹೆಚ್ಚಿಸಲು ಕೇಂದ್ರಕ್ಕೆ ಬರೆದಿದ್ದಾರೆ. ನಿಮ್ಮ ಒತ್ತಡಕ್ಕೆ ಒಳಗಾಗಿ ಕೇಂದ್ರ ಅನುಮತಿ ಕೊಟ್ಟಿದೆ ಎಂದು ದೂರಿದ್ದಾರೆ.

ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಆಗುತ್ತಿಲ್ಲ, ಕಾನೂನು ಸುವ್ಯವಸ್ಥೆ ಸರಿಯಿಲ್ಲ. ದನದ ಕೆಚ್ಚಲು ಕೊಯ್ದವರನ್ನು ಮಾನಸಿಕ ಅಸ್ವಸ್ಥ ಎನ್ನುತ್ತಾರೆ. ಪೊಲೀಸ್ ಠಾಣೆಗೆ ದಾಳಿ ಮಾಡಲಾಗಿದೆ, ಆಸ್ಪತ್ರೆಯಲ್ಲಿ ಬಾಣಂತಿಯ ಸಾವಾಗುತ್ತಿದೆ, ಎಲ್ಲವನ್ನ ಕೇಂದ್ರ ಸರ್ಕಾರ ಮಾಡೋದಾದ್ರೆ ಸಿದ್ದರಾಮಯ್ಯನವರೇ ನೀವು ಏಕೆ ಅಧಿಕಾರ ನಡೆಸುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಕೊಟ್ಟಿದ್ದರ ಮೂರು ಪಟ್ಟು ವಸ್ತುಗಳ ಬೆಲೆ ಹೆಚ್ಚಳ ಮಾಡಿದ್ದೀರಿ. ಪದೇ ಪದೇ ಕೇಂದ್ರದತ್ತ ಕೈ ತೋರಿಸುವುದನ್ನು ಬಿಡಿ. ನಿಮ್ಮದು ದಿವಾಳಿ ಸರ್ಕಾರ, ಮೋದಿ ಜಪ ಮಾಡುವುದನ್ನು ಬಿಡಿ, ಯಾವ ಸಚಿವರು ಜಿಲ್ಲೆಗಳಿಗೆ ಹೋಗಿದ್ದಾರೆ? ಎಷ್ಟು ರಿವಿವ್ಯೂ ಮೀಟಿಂಗ್ ಮಾಡಿದ್ದಾರೆ? ಕೇಂದ್ರದತ್ತ ಬೊಟ್ಟು ಮಾಡುವುದನ್ನು ಬಿಟ್ಟು, ನೆಟ್ಟಗೆ ಆಡಳಿತ ಮಾಡಿ ಇಲ್ಲವೇ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಜಾತಿ ಜನಗಣತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಒಡೆದು ಆಳುವ ನೀತಿ ಮಾಡುತ್ತಿದ್ದಾರೆ. ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣರ ಉಪಜಾತಿಗಳನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮೇಜರ್ ಜಾತಿ ಒಡೆಯಬೇಕು ಎಂದು ಮಾಡುತ್ತಿದ್ದಾರೆ. ಬ್ರಿಟಿಷರ ಮೆಂಟಾಲಿಟಿ ಸಿದ್ದರಾಮಯ್ಯನವರದ್ದು ಎಂದು ಲೇವಡಿ ಮಾಡಿದ್ದಾರೆ.

Leave a Reply

Your email address will not be published. Required fields are marked *