ಬೆಂಗಳೂರು: ಬೆಂಗಳೂರಿನ ಕ್ಯಾಬ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಪೊಲೀಸರು ಹೊಸ ಸುರಕ್ಷತಾ ಕ್ರಮವನ್ನು ಪರಿಚಯಿಸಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಕ್ಯಾಬ್ಗಳಲ್ಲಿ 112 ತುರ್ತು ಸಹಾಯವಾಣಿ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಮೊಬೈಲ್ ಅಪ್ಲಿಕೇಷನ್ ಬಗ್ಗೆ ಮಾಹಿತಿಯನ್ನು ಹೊಂದಿರುವ ಸ್ಟಿಕ್ಕರ್ಗಳನ್ನು ಅಂಟಿಸಬೇಕೆಂದು ಪೊಲೀಸರು ಸೂಚನೆ ನೀಡಿದ್ದಾರೆ.
ಸಾರ್ವಜನಿಕರ ಸುರಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಪ್ರಯಾಣಿಕರ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ. ಡೆಕ್ಕನ್ ಹೆರಾಲ್ಡ್ ಈ ಕುರಿತು ವರದಿ ಪ್ರಕಟ ಮಾಡಿದ್ದು, ಸ್ಪಷ್ಟವಾಗಿ ಗೋಚರಿಸುವ ಸಹಾಯವಾಣಿ ವಿವರಗಳು ಅಪರಾಧವನ್ನು ತಡೆಯಲು ಮತ್ತು ಸಂಚಾರ ನಿರ್ವಹಣೆಗೆ ಸಹಾಯ ಮಾಡಬಹುದು ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.
ವರದಿಯ ಪ್ರಕಾರ, ಕ್ಯಾಬ್ ನಿರ್ವಾಹಕರು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಮುದ್ರಿತವಾದ ಸ್ಟಿಕ್ಕರ್ಗಳನ್ನು ತಮ್ಮ ವಾಹನಗಳ ಎರಡು ಬದಿಗಳಲ್ಲಿ ಅಂಟಿಸುವಂತೆ ಸೂಚನೆ ನೀಡಿದ್ದಾರೆ. ಹೊಸ ಆದೇಶದಲ್ಲಿ 12,000 ಕ್ಕೂ ಹೆಚ್ಚು ಕ್ಯಾಬ್ಗಳನ್ನು ಈಗಾಗಲೇ ಶಾರ್ಟ್ ಲಿಸ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಉಳಿದ ಎಲ್ಲಾ ವಾಹನಗಳು ಅನುಮೋದಿತ ಸ್ಟಿಕ್ಕರ್ಗಳನ್ನು ಅಳವಡಿಸಲು ದೃಢವಾದ ಗಡುವನ್ನು ಸಹ ನಿಗದಿಪಡಿಸಲಾಗಿದೆ.
ಪೊಲೀಸರು ನೀಡಿದ ಟೆಂಪ್ಲೇಟ್ 112 ಸಹಾಯವಾಣಿ ಸಂಖ್ಯೆಯೊಂದಿಗೆ ಬಳಕೆದಾರರನ್ನು ನೇರವಾಗಿ ಕೆಎಸ್ಪಿ ಮೊಬೈಲ್ ಅಪ್ಲಿಕೇಶನ್ಗೆ ಸಂಪರ್ಕಿಸುವ ಕ್ಯೂಆರ್ ಕೋಡ್ ಅನ್ನು ಒಳಗೊಂಡಿರುತ್ತದೆ. ಅಧಿಕಾರಿಗಳ ಪ್ರಕಾರ, ಇದರಿಂದ ಒಂಟಿಯಾಗಿ ಅಥವಾ ದೂರದ ಸ್ಥಳಗಳಿಗೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲವಾಗಲಿದೆ. ಈ ತುರ್ತು ಸಹಾಯವಾಗಿ ಪೊಲೀಸ್ ಕಮಿಷನರ್ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿದೆ.
112 ಸಂಖ್ಯೆಗೆ ಕರೆ ಮಾಡಿದರೆ ಹದಿನೈದೇ ನಿಮಿಷಗಳಲ್ಲಿ ಪೊಲೀಸರು ನೀವು ಕೊಟ್ಟ ವಿಳಾಸಕ್ಕೆ ಹಾಜರಾಗಿ ಸಮಸ್ಯೆಗೆ ಪರಿಹಾರವನ್ನು ಕೊಡುವ ಕೆಲಸವನ್ನು ಮಾಡುತ್ತಾರೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ನಿರ್ಭಯಾ ನಿಧಿ ಯೋಜನೆಯಡಿ ಏಕ ಸಂಖ್ಯೆಯ ಬಳಕೆಯನ್ನು ಜಾರಿಗೆ ತರಲಾಗಿದೆ. ಮಹಿಳೆಯರು ರಾತ್ರಿ ವೇಳೆ ಒಬ್ಬರೇ ಓಡಾಟವನ್ನು ನಡೆಸಿದಾಗ ಯಾರಾದರೂ ಕೆಟ್ಟದಾಗಿ ನಡೆದುಕೊಂಡರೆ ಅವರ ಸಹಾಯಕ್ಕೆ ಧಾವಿಸಲು ಈ ಸಂಖ್ಯೆಯನ್ನು ಪರಿಚಯಿಸಲಾಗಿದೆ.
For More Updates Join our WhatsApp Group :
