ಪುಲ್ವಾಮಾ (ಜಮ್ಮು ಮತ್ತು ಕಾಶ್ಮೀರ): ಪಹಲ್ಗಾಮ್ ಉಗ್ರರ ದಾಳಿ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರವು ಉಗ್ರ ಸಂಘಟನೆಯಲ್ಲಿ ಭಾಗಿಯಾದವರ ಮನೆ ಧ್ವಂಸಕ್ಕೆ ಮುಂದಾಗಿದೆ. ಟ್ರಾಲ್ ಮತ್ತು ಬಿಜ್ಬೆಹರಾ ಉಗ್ರರ ಮನೆ ನೆಲ ಸಮವಾದ ಬಳಿಕ ಇದೀಗ ಪುಲ್ವಾಮಾ ಜಿಲ್ಲೆಯ ಮೋರನ್ ಮತ್ತು ಕಚಿಪೋರಾ ಪ್ರದೇಶದ ಉಗ್ರ ಎಹ್ಸಾನ್ ಅಹ್ಮದ್ ಶೇಖ್ ಮತ್ತು ಹರೀಸ್ ಅಹ್ಮದ್ ಅವರ ಮನೆಗಳನ್ನು ಧ್ವಂಸ ಮಾಡಲಾಗಿದೆ.

2023ರ ಜೂನ್ನಿಂದ ಲಷ್ಕರ್ ಎ ತೊಯ್ಬಾ (ಎಲ್ಇಟಿ) ಉಗ್ರ ಸಂಘಟನೆಯಲ್ಲಿ ಎಹ್ಸಾನ್ ಅಹ್ಮದ್ ಶೇಖ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಜಿಲ್ಲೆಯ ಕಚಿಪೋರಾ ಪ್ರದೇಶದ ಹರೀಸ್ ಅಹ್ಮದ್ ಕೂಡ 2023 ರಿಂದ ಎಲ್ಇಟಿ ಭಯೋತ್ಪಾದಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಈತ ಪಹಲ್ಗಾಮ್ ದಾಳಿಯಲ್ಲೂ ಶಂಕಿತನಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೆ ಭದ್ರತಾ ಪಡೆ ನಾಲ್ವರು ಉಗ್ರರ ಮನೆಗಳನ್ನು ಧ್ವಂಸ ಮಾಡಿದ್ದು, ಈ ಪ್ರದೇಶದಲ್ಲಿ ಉಗ್ರರ ಶೋಧ ಕಾರ್ಯ ಮುಂದುವರೆದಿದೆ.
ಇದಕ್ಕೆ ಮುಂಚೆ ಅಂದರೆ ದಕ್ಷಿಣ ಕಾಶ್ಮೀರದ ಟ್ರಾಲ್ನ ಮೊಂಘಮಾ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆಸಿಫ್ ಶೇಖ್ ಮನೆಯನ್ನು ಸ್ಫೋಟಿಸಿ, ಧ್ವಂಸಗೊಳಿಸಲಾಗಿತ್ತು. ಆಸಿಫ್ ಶೇಖ್ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಪಹಲ್ಗಾಮ್ ದಾಳಿಯಲ್ಲಿ ಈತನ ಹೆಸರೂ ಕೇಳಿಬರುತ್ತಿದೆ. ಈ ಮಧ್ಯೆ, ಅನಂತ್ನಾಗ್ ಜಿಲ್ಲೆಯ ಬಿಜ್ಬೆಹರಾದಲ್ಲಿ ಆದಿಲ್ ಥೋಕರ್ ಎಂಬ ಉಗ್ರನ ಮನೆಯನ್ನು ಧ್ವಂಸ ಮಾಡಲಾಗಿದೆ.
ಇನ್ನೊಂದೆಡೆ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ದಟತನ ಮೆರೆದ ಪಾಕ್ ಸೈನಿಕರಿಗೆ ಭಾರತೀಯ ಭದ್ರತಾ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ. ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ಮಾಡಿದ ಪಾಕ್ಗೆ ನಮ್ಮ ಸೈನಿಕರು ಕೂಡ ಗುಂಡು ಹಾರಿಸಿ ಸೂಕ್ತ ಪ್ರತ್ಯುತ್ತರ ನೀಡಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರವಾಸಿಗರ ಮಾರಣಹೋಮ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬಳಿಯ ‘ಮಿನಿ ಸ್ವಿಟ್ಜರ್ ಲ್ಯಾಂಡ್’ ಎಂದೇ ಪ್ರಸಿದ್ಧವಾಗಿರುವ ಹುಲ್ಲುಗಾವಲು ಪ್ರದೇಶದಲ್ಲಿ ಭಯೋತ್ಪಾದಕರು ಏಪ್ರಿಲ್ 22 ರಂದು ಕಂಡ ಕಂಡ ಪ್ರವಾಸಿಗರ ಮೇಲೆ ಗುಂಡು ಹಾರಿಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು. ಇದರಲ್ಲಿ ಇಬ್ಬರು ಕನ್ನಡಿಗರು, ನೌಕಾಪಡೆ, ಗುಪ್ತಚರ ದಳ ಅಧಿಕಾರಿ ಸಾವನ್ನಪ್ಪಿದ್ದಾರೆ. 2019 ರಲ್ಲಿ ಪುಲ್ವಾಮಾ ದಾಳಿಯ ನಂತರದ ಅತ್ಯಂತ ಭೀಕರ ದಾಳಿ ಇದಾಗಿದೆ.
ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಈ ದಾಳಿಯ ಹೊಣೆ ಹೊತ್ತಿದೆ.