7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು.
ಯಾದಗಿರಿ: ರಾಜ್ಯದಲ್ಲಿ ಇಂದಿನಿಂದ ದ್ವಿತೀಯಪಿಯುಸಿಪರೀಕ್ಷೆಗಳು ಆರಂಭವಾಗಿದ್ದು, 7.10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಎಕ್ಸಾಂ ಬರೆಯುತ್ತಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೇತೃತ್ವದಲ್ಲಿ ರಾಜ್ಯದ್ಯಂತ 1,217 ಕೇಂದ್ರಗಳಲ್ಲಿ ಎಕ್ಸಾಂ ನಡೆಯುತ್ತಿದ್ದು, ಪರೀಕ್ಷೆ ಹಿನ್ನೆಲೆ ಸಿಸಿ ಕ್ಯಾಮರಾ ಕಣ್ಗಾವಲು ಸೇರಿದಂತೆ ಬಿಗಿ ಭದ್ರತೆ ಒದಗಿಸಲಾಗಿದೆ. ಈ ನಡುವೆ ಪಿಯು ಬೋರ್ಡ್ ಹಾಗೂ ಕಾಲೇಜು ಆಡಳಿತ ಮಂಡಳಿ ಮಾಡಿರುವ ಯಡವಟ್ಟಿಗೆ ಎಕ್ಸಾಂ ಬರೆಯಲು ಬಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿರುವ ಪ್ರಸಂಗ ಯಾದಗಿರಿಯಲ್ಲಿ ನಡೆದಿದೆ.
ಪರೀಕ್ಷಾ ಕೇಂದ್ರ ಹುಡುಕಲು ಪರದಾಟ
ಪರೀಕ್ಷಾ ಕೇಂದ್ರ ಇರೋದೆ ಒಂದು ಕಡೆಯಾದರೆ ಹಾಲ್ ಟಿಕೆಟ್ನಲ್ಲಿ ನಮೂದಿಸಿರುವ ವಿಳಾಸವೇ ಬೇರೆ ಆಗಿರುವ ಕಾರಣಕ್ಕೆ ದ್ವೀತಿಯ ಪಿಯು ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಯಾದಗಿರಿಯಲ್ಲಿ ಪರದಾಡಿದ್ದಾರೆ. ಯಾದಗಿರಿ ನಗರ ಸಬಾ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದ ವಿಚಾರವಾಗಿ ಗೊಂದಲ ಉಂಟಾಗಿದ್ದು, ಬೇರೆ ಬೇರೆ ಊರುಗಳಿಂದ ಬಂದ ವಿದ್ಯಾರ್ಥಿಗಳು ಕೆಲ ಕಾಲ ಆತಂಕ್ಕೆ ಒಳಗಾದ ಪ್ರಸಂಗ ನಡೆದಿದೆ. ಕಾಲೇಜು ಇರೋದು ಲುಂಬಿನಿ ಪಾರ್ಕ್ ಹತ್ತಿರವಾದ್ರೆ, ಹಾಲ್ ಟಿಕೆಟ್ನಲ್ಲಿ ಗಂಜ್ ರೋಡ್ ಎಂದು ನಮೂದಿಸಲಾಗಿದೆ. ಹೀಗಾಗಿ ಗಂಟೆಗಳ ಕಾಲ ಪರೀಕ್ಷಾ ಕೇಂದ್ರಕ್ಕಾಗಿ ಹುಡುಕಾಡಿರುವ ವಿದ್ಯಾರ್ಥಿಗಳು ಅಂತಿಮವಾಗಿ ಸ್ಥಳೀಯರ ಸಹಾಯದಿಂದ ಸಬಾ ಪಿಯು ಕಾಲೇಜು ತಲುಪಿದ್ದಾರೆ.
ಇಂದಿನಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಕ್ಕೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮೊಬೈಲ್ ನಿರ್ಬಂಧ ವಿಧಿಸಲಾಗಿದೆ. ಪರೀಕ್ಷೆ ವೇಳೆ ಎಲೆಕ್ಟ್ರಾನಿಕ್ ಸಾಮಗ್ರಿ ವಸ್ತುಗಳ ಬಳಕೆ, ಅನಧಿಕೃತ ವ್ಯಕ್ತಿಗಳ ಪ್ರವೇಶ, ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಷೇಧಿತ ವಲಯದಲ್ಲಿ ಸ್ಫೋಟಕ ವಸ್ತು ತೆಗೆದುಕೊಂಡು ಹೋಗುವಂತಿಲ್ಲ. ಜೊತಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಕೆ ಕಡ್ಡಾಯ ಮಾಡಲಾಗಿದೆ.
For More Updates Join our WhatsApp Group :




