ಬೆಂಗಳೂರಿನಲ್ಲಿ ಕಳ್ಳತನದ ಶಾಕ್: ಬಾಗಿಲು ತೆರೆದಿಟ್ಟ ಮಹಿಳೆಗೆ ಕಾದಿತ್ತು ಶಾಕ್!

ಬೆಂಗಳೂರಿನಲ್ಲಿ ಕಳ್ಳತನದ ಶಾಕ್: ಬಾಗಿಲು ತೆರೆದಿಟ್ಟ ಮಹಿಳೆಗೆ ಕಾದಿತ್ತು ಶಾಕ್!

ಅಶೋಕನಗರದಲ್ಲಿ 1.5 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್ ಕಳವು.

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಬೇಸಿಗೆಯ ಶಾಖದಿಂದ ಪಾರಾಗಲು ಮನೆಯ ಮುಖ್ಯ ಬಾಗಿಲನ್ನು ತೆರೆದಿಟ್ಟಿದ್ದೇ ಮಹಿಳೆಯೊಬ್ಬರಿಗೆ ಮುಳುವಾಗಿದೆ. ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆನೆಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಕಳ್ಳರು ಮಾಂಗಲ್ಯ ಸರ ಮತ್ತು ಮೊಬೈಲ್‌ಗಳನ್ನು ದೋಚಿದ್ದಾರೆ.

ಅಶೋಕನಗರದ ನಿವಾಸಿ ಶೈಲಜಾ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮುಂಜಾನೆ ಸುಮಾರು 2:30ರ ಸುಮಾರಿಗೆ ಮನೆಯೊಳಗೆ ಗಾಳಿ ಬರಲಿ ಎಂಬ ಕಾರಣಕ್ಕೆ ಮುಖ್ಯ ಬಾಗಿಲನ್ನು ತೆರೆದಿಟ್ಟು ಗಾಢ ನಿದ್ರೆಗೆ ಜಾರಿದ್ದರು. ಇದೇ ಸಮಯಕ್ಕೆ ಹೊಂಚು ಹಾಕುತ್ತಿದ್ದ ಕಳ್ಳರು ಮನೆಯೊಳಗೆ ನುಗ್ಗಿ, ಅವರ ಪಕ್ಕದಲ್ಲೇ ಇದ್ದ 18 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಅಪಹರಿಸಿದ್ದಾರೆ. ಕಳುವಾದ ಒಟ್ಟು ಮೌಲ್ಯ ಸುಮಾರು 1.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಇನ್ನು ಈ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ರಾತ್ರಿ ವೇಳೆ ಎಷ್ಟೇ ಸೆಖೆಯಿದ್ದರೂ ಮನೆಯ ಮುಖ್ಯ ಬಾಗಿಲನ್ನು ಲಾಕ್ ಮಾಡುವುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ. ಕಿಟಕಿಗಳಿಗೆ ಗಟ್ಟಿಮುಟ್ಟಾದ ಗ್ರಿಲ್ ಅಳವಡಿಸಿ. ಬೆಲೆಬಾಳುವ ಚಿನ್ನಾಭರಣ ಮತ್ತು ಮೊಬೈಲ್‌ಗಳನ್ನು ಮಲಗುವಾಗ ನಿಮ್ಮ ಪಕ್ಕದಲ್ಲಿ ಅಥವಾ ಕಿಟಕಿಯ ಹತ್ತಿರ ಇಡಬೇಡಿ. ಮನೆಯ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಸುರಕ್ಷಿತ ಎಂದು ಸಲಹೆಗಳನ್ನು ನೀಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *